ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಚಾಲನೆ
Monday, December 29, 2025
ಮೂಲ್ಕಿ:ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಹೊರನಾಡು ಅನ್ನಪೂರ್ಣೇಶ್ವರೀ ಕ್ಷೇತ್ರದ ಭೀಮೇಶ್ವರ ಜೋಶಿ ಅವರು ಪಡುಪಣಂಬೂರು ಅರಮನೆಯ ಬಾಕಿಮಾರು ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.
ಮೊದಲಿಗೆ ಮೂಲ್ಕಿ ಅರಮನೆಯ ಚಂದ್ರನಾಥಸ್ವಾಮಿ ಪದ್ಮಾವತಿ ದೇವಳದಲ್ಲಿ ಮೂಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ, ಧರ್ಮಚಾವಡಿಯಲ್ಲಿ ಅರಸರ ಅಪ್ಪಣೆಯನ್ನು ಪಡೆದುಕೊಂಡು, ಎರು ಬಂಟ ದೈವದ ಜೊತೆಗೆ ಕೊಂಬು ವಾದ್ಯ, ತಾಸೆ, ದೋಲು, ಕುದುರೆ ಸವಾರಿಯೊಂದಿಗೆ ಕಂಬಳದ ಕರೆಯಲ್ಲಿ ಪ್ರಸಾದ ಹಾಕಿ, ಚಾಲನೆ ನೀಡಿದರು. ಸಂಪ್ರದಾಯದಂತೆ ಬಪ್ಪನಾಡು ಕಾಂತು ಬೈದ್ಯರ ಮನೆಯ ಕೋಣಗಳನ್ನು ಹಾಗೂ ಅರಮನೆಯ ಕೋಣಗಳು ಓಡಿದ ನಂತರ ಸುಮಾರು ೧೮೦ಕ್ಕೂ ಹೆಚ್ಚು ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದವು.
ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಾ.ಗಣೇಶ್ ಅಮೀನ್ ಸಂಕಮಾರ್, ವಿವಿಧ ಧಾರ್ಮಿಕ ಕ್ಷೇತ್ರಗಳ ರಂಗನಾಥ ಭಟ್, ಸ್ಟೀವನ್ ಸರ್ವೋತ್ತಮ, ಅನಿಲ್ ಅಲ್ಫನ್ ಡಿ ಸೋಜಾ, ಮಹಮ್ಮದ್ ಷರೀಫ್, ಚಾವಡಿ ಮನೆ ಜಗನ್ನಾಥ ಶೆಟ್ಟಿ, ಪಾವಂಜೆ ಕ್ಷೇತ್ರದ ಸೂರ್ಯಕುಮಾರ್, ತೋಕೂರು ಕ್ಷೇತ್ರದ ಗುರುರಾಜ್ ಪೂಜಾರಿ, ಎಚ್. ವಸಂತ್ ಬೆರ್ನಾಡ್, ಕಲ್ಲಾಪು ಕ್ಷೇತ್ರದ ಕಾಂತಣ್ಣ ಗುರಿಕಾರ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಐಕಳ, ಯಾದವ ದೇವಾಡಿಗ, ಕಂಬಳ ಸಂಯೋಜಕ ಗೌತಮ್ ಜೈನ್, ಯಶೋಧರ ಸಾಲ್ಯಾನ್, ವಿನೋದ್ ಸಾಲ್ಯಾನ್, ನವೀನ್ ಶೆಟ್ಟಿ ಎಡ್ಮೆಮಾರ್, ಚಂದ್ರಶೇಖರ್ ಜಿ, ಸುದರ್ಶನ್ ಪಂಜ ಮತ್ತಿತರರು ಇದ್ದರು.