ಎಕ್ಕಾರು ಮಡಿವಾಳ ಕಟ್ಟದ ಅಣೆಕಟ್ಟುವಿಗೆ ಹಲಗೆ ಹಾಕುವ ಕಾರ್ಯ
Monday, December 29, 2025
ಬಜಪೆ:ಜಿಲ್ಲಾ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ.) ಎಕ್ಕಾರು ಸಂಸ್ಥೆಯ ಮುತುವರ್ಜಿಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ಎಕ್ಕಾರು ನಳಿನಿ ನದಿಗೆ ಎಕ್ಕಾರು ಮಡಿವಾಳ ಕಟ್ಟದ ಅಣೆಕಟ್ಟುವಿಗೆ ಹಲಗೆ ಹಾಕುವ ಕಾರ್ಯವು ನಡೆಯಿತು.
ಸಂಸ್ಥೆ ಹಾಗೂ ಸ್ಥಳೀಯರ ಸಹಕಾರದಲ್ಲಿ ನಿರಂತರವಾಗಿ ಹಲವು ವರ್ಷಗಳಿಂದ ಅಣೆಕಟ್ಟು ಹಾಕುವ ಕಾರ್ಯವನ್ನು ಮಾಡುತ್ತ ಬಂದಿದ್ದು, ಕಳೆದ ಎರಡು ವರ್ಷಗಳಿಂದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಹಾಯಿಸಲು ಹೂಳು ತುಂಬಿ ಮುಚ್ಚಿ ಹೋಗಿದ್ದ ಕಾಲುವೆಯನ್ನು ಪುನರುಜ್ಜೀವನಗೊಳಿಸುವ ಮಹತ್ಕಾರ್ಯವನ್ನೂ ಮಾಡಿ ಪೂರೈಸಿದೆ. ಶ್ರಮದಾನ ಹಾಗು ಯಾಂತ್ರಿಕ - ಜೆಸಿಬಿ ಸಹಾಯದಿಂದ ಸುವ್ಯವಸ್ಥಿತವಾದ ಕಾಲುವೆಯ ಕೆಲಸವನ್ನು ಸಮರ್ಪಕವಾಗಿ ವಿಜಯ ಯುವ ಸಂಗಮ (ರಿ.) ಎಕ್ಕಾರು ಸಂಸ್ಥೆ ಪೂರೈಸಿದ್ದು ಕೃಷಿ ಭೂಮಿಗೆ ಈಗ ಅಣೆಕಟ್ಟಿನ ನೀರು ಹರಿಯುವಂತಾಗಿದೆ. ತತ್ಪರಿಣಾಮವಾಗಿ ಉತ್ತಮ ಅಂತರ್ಜಲ ವೃದ್ಧಿಯಾಗಿದ್ದು ಕುಡಿಯುವ ನೀರಿನ ಬಾವಿ, ಕೃಷಿ ನೀರಾವರಿ ಬಾವಿಗಳು ಬೇಸಗೆ ಕಾಲದಲ್ಲೂ ಬತ್ತದೆ ಉಳಿಯುವಂತಾಗಿರುವುದು ಶ್ಲಾಘನೀಯ. ಬಡಕರೆ, ತಾಂಗಾಡಿ, ನಡ್ಯೋಡಿ ಭಾಗದ ಜನರು ಈ ಅಣೆಕಟ್ಟು ನೀರಿನ ಫಲಾನುಭವಿಗಳಾಗಿದ್ದು ಬಹುಜನಪಯೋಗಿ ವ್ಯವಸ್ಥೆ ಇದಾಗಿದೆ.
ಈ ಕಾರ್ಯದಲ್ಲಿ ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ, ಸಿರಿಕುರಲ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಮುರ ಸದಾಶಿವ ಶೆಟ್ಟಿ, ಶಿವದಾಸ ಭಟ್ ರಾಜಮಂದಿರ, ವಿಜಯ ಯುವ ಸಂಗಮದ ಅಧ್ಯಕ್ಷ ಪ್ರವೀಣ್ ಕೆ. ಎಮ್, ಎಕ್ಕಾರು ಗ್ರಾ.ಪಂ ಸದಸ್ಯ ವಿಕ್ರಮ್ ಮಾಡ, ಸಂಗಮ ಸದಸ್ಯರುಗಳು ಹಾಗೂ ಸ್ಥಳೀಯರು ಪಾಲ್ಗೊಂಡರು.