ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಖ್ಯ : ಶ್ರೀ ಚಂದ್ರಶೇಖರ ಸ್ವಾಮೀಜಿ
Friday, November 21, 2025
ಬೆಂಗಳೂರು : ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯೊಂದಿಗೆ ಕಾನೂನಿನ ಮೇಲೆ ವಿಶ್ವಾಸವನ್ನು ಹೊಂದಿರಬೇಕು, ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಇದ್ದವನಿಗೆ ನ್ಯಾಯದ ಮೇಲಿನ ಭರವಸೆ ಎಂದಿಗೂ ಹುಸಿಯಾಗುವುದಿಲ್ಲ, ಇಂದು ನಮ್ಮ ನಡುವೆ ನ್ಯಾಯಾಧೀಶರಾದವರು ತಮ್ಮ ಸರಳ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಿಕೊಂಡವರಲ್ಲಿ ನಾಗಲಿಂಗನ ಗೌಡ ಅವರೂ ಸಹ ಒಬ್ಬರಾಗಿದ್ದಾರೆ. ಅವರ ತೀರ್ಪುಗಳೇ ಅವರನ್ನು ಗೌರವಿಸಿದೆ ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ನುಡಿದರು.
ಅವರು ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ನಡೆದ ಕರುನಾಡ ಸಾಧಕರು ಎಂಬ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಜಸ್ಟಿಸ್ ಹಾಗೂ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಬೆಂಗಳೂರು. ಕರ್ನಾಟಕ ಸರಕಾರ ಇದರ ಅಧ್ಯಕ್ಷರಾಗಿರುವ ನಾಗಲಿಂಗನ ಗೌಡ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿ ನಾಗಲಿಂಗನ ಗೌಡ ಮಾತನಾಡಿ, ಸ್ವಾಮೀಜಿಯವರ ಸೇವಾ ಕಾರ್ಯ ನಿರಂತರವಾಗಿ ಮುಂದುವರಿಯಲಿ, ಸಮಾಜದಲ್ಲಿ ಅಶಕ್ತರಿಗೆ ಆಸರೆಯಾಗಿ, ಸದಾ ಸನ್ಮಾರ್ಗದಲ್ಲಿ ಸಾಗುವವರನ್ನು ಗೌರವಿಸುವ ಅವರ ಗುಣ ವಿಶೇಷತೆಯಿಂದ ಅವರ ನೇತೃತ್ವದ ಸೇವಾ ಶ್ರಮವನ್ನು ನಾಡಿನ ಜನತೆ ಗುರುತಿಸುತ್ತಿದೆ ಎಂದರು.
ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್, ರಾಹುಲ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಆಶ್ರಮದ ವಕ್ತಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.