ಮಣ್ಣಿನ ಸುಗಂಧ ಹೊತ್ತು ತಂದವರು ಕೃಷಿಕರು - ಗುರುರಾಜ್ ಭಟ್
Saturday, October 18, 2025
ಮೂಲ್ಕಿ:ಬೇಸಿಗೆಯ ಬೆವರು, ಮಳೆಯ ಕಷ್ಟ, ಮಣ್ಣಿನ ಒಡನಾಟ ಎಲ್ಲವನ್ನೂ ಅಪ್ಪಿಕೊಂಡು, ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ ಕೃಷಿಕರು ತಮ್ಮ ಪರಿಶ್ರಮದಿಂದ ಕೇವಲ ಕುಟುಂಬವನ್ನೇ ಅಲ್ಲ, ಸಮಾಜದ ಅನ್ನಭದ್ರತೆಯನ್ನು ಕೂಡ ಬಲಪಡಿಸಿದ್ದಾರೆ. ಅಂತಹ ಕೃಷಿಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಗೆಳೆಯರ ಮತ್ತು ಗೆಳತಿಯರ ಬಳಗ ದೇಂದಡ್ಕ- ಪುತ್ತೂರಿನ ಅಧ್ಯಕ್ಷ ಗುರುರಾಜ್ ಭಟ್ ದೇಂದಡ್ಕ ಹೇಳಿದರು.
ಅವರು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಮೂಲ್ಕಿ ತಾಲ್ಲೂಕಿನ ಕವತ್ತಾರು ಗ್ರಾಮದ ದೇಂದಡ್ಕ - ಪುತ್ತೂರಿನ ಪಿ.ಜಿ.ಎಮ್ ಹೌಸ್ ನಲ್ಲಿ
ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಆಹಾರ ಜಾಗೃತಿ-2025 ರ ಕಾರ್ಯಕ್ರಮದಲ್ಲಿ ಸುಮಾರು ಅರವತ್ತು ವರುಷದಿಂದ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಕವತ್ತಾರು ಗ್ರಾಮದ ಶ್ರೀಮತಿ ಯಮುನಾ ಗುಡ್ಡ ದೇವಾಡಿಗ ದೇಂದಡ್ಕ - ಪುತ್ತೂರು ಇವರಿಗೆ “ಕೃಷಿ ರತ್ನ – 2025” ಎಂಬ ಬಿರುದನ್ನು ನೀಡಿ ಸನ್ಮಾನಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪೃಥ್ವಿ ಎರೇಂಜರ್ಸ್ ಮೈಲೊಟ್ಟುನ ಮಾಲಕ ಪ್ರಭಾಕರ ಶೆಟ್ಟಿ ಸಾಗುಮನೆ, ಪಿ.ಸುಬ್ರಹ್ಮಣ್ಯ ಭಟ್ ದೇಂದಡ್ಕ, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷ ಅಕ್ಷತಾ ಶೆಟ್ಟಿ ಪದಾಧಿಕಾರಿಗಳಾದ ದಾಮೋದರ ಶೆಟ್ಟಿ ಕೊಡೆತ್ತೂರು, ಶೋಭಾ ರಾವ್ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಜನವಿಕಾಸ ಸಮಿತಿ ಮೂಲ್ಕಿಯ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.