ಎಕ್ಕಾರಿನಿಂದ ಕಟೀಲಿಗೆ ಮಿಥುನ್ ರೈ ನೇತೃತ್ವದಲ್ಲಿ ಸತ್ಯಪ್ರಮಾಣಕ್ಕಾಗಿ ಪಾದಯಾತ್ರೆ
Friday, September 26, 2025
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿವಿಧ ಸೇವೆಗಳಿಗೆ ದರಪಟ್ಟಿಯನ್ನೇ ರಾಜಕೀಯವಾಗಿ ಬಳಸಿಕೊಂಡ ಬಿಜೆಪಿಯ ಅಪಪ್ರಚಾರದ ವಿರುದ್ಧ ಎಕ್ಕಾರು ಶ್ರೀ ಕುಂಭಕಂಠೀಣಿ ದೈವಸ್ಥಾನದಿಂದ ಕಟೀಲು ಕ್ಷೇತ್ರಕ್ಕೆ ಭಕ್ತರೊಂದಿಗೆ ಬೃಹತ್ ಪಾದಾಯಾತ್ರೆಯನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ನಡೆಸಿದರು.
ಮೂಲ್ಕಿ ಮತ್ತು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಪಾದಾಯತ್ರೆಯನ್ನು ಸಂಘಟಿಸಿತ್ತು. ದೇವಳದಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಆಡಳಿತ ಮಂಡಳಿಗೆ ಮನವಿಯನ್ನು ಸಲ್ಲಿಸಿ ದರ ಪರಿಷ್ಕರಣೆಗೊಳಿಸಿ, ಕೆಲವೊಂದು ಸೇವೆಯ ದರವನ್ನು ಕಡಿಮೆ ಮಾಡಲು ವಿನಂತಿಸಿದರು.
ಮನವಿಯನ್ನು ಕಟೀಲು ದೇವಳದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಹರಿನಾರಾಯಣದಾಸ ಆಸ್ರಣ್ಣ ಸ್ವೀಕರಿಸಿ, ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಮಾಧ್ಯಮದೊಂದಿಗೆ ಮಿಥುನ್ ರೈ ಮಾತನಾಡಿ, ಬಿಜೆಪಿಯು ಕಟೀಲು ದೇವಳದ ದರಪರಿಷ್ಕರಣೆಯ ಅಪಪ್ರಚಾರ ನಡೆಸುತ್ತಿದೆ. ದೇವಳದ ಆಡಳಿತ ಮಂಡಳಿಯ ನಿರ್ಧಾರವನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಸುಳ್ಳು ಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಬಹಿರಂಗವಾಗಿ ಸತ್ಯ ಪ್ರಮಾಣಕ್ಕೆ ಆಹ್ವಾನವನ್ನು ನೀಡಿದ್ದರೂ ಅವರು ಸ್ವೀಕರಿಸಿಲ್ಲ, ಪಾದಾಯಾತ್ರೆಯ ಮೂಲಕ ಧರ್ಮ ಜಾಗೃತಿಯನ್ನು ನವರಾತ್ರಿಯ ಸಂದರ್ಭದಲ್ಲಿ ಮಾಡಿದ್ದೇವೆ. ಭಕ್ತರ ಮನಸ್ಸಿನಲ್ಲಿ ತಪ್ಪು ಗ್ರಹಿಕೆ ಆಗಬಾರದು ಎಂಬ ಉದ್ದೇಶದಿಂದ ಈ ಪಾದಾಯಾತ್ರೆ ನಡೆದಿದೆ ಎಂದರು.
ರಾಜ್ಯದ ಉಳಿದ ದೇವಸ್ಥಾನದಲ್ಲಿಯೂ ಸ್ಥಳೀಯರ ಮೂಲಕ ದರ ಪರಿಷ್ಕರಣೆಗೆ ಮನವಿ ಮಾಡಲಾಗುವುದು, ಸಚಿವರಲ್ಲಿಯೂ ಮಾತನಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಕ್ರಿಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡಬಿದಿರೆಯ ಅಧ್ಯಕ್ಷ ಪ್ರವೀಣ್ಕುಮಾರ್ ಜೈನ್, ಮೂಲ್ಕಿ ಬ್ಲಾಕ್ ನ ಉಸ್ತುವಾರಿ ಕಾರ್ಪೋರೇಟರ್ ಅನಿಲ್ ಕುಮಾರ್ ಪೂಜಾರಿ, ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು, ಮಮತಾ ಗಟ್ಟಿ, ಮಂಜುನಾಥ ಕಂಬಾರ, ಪುರಂದರ ದೇವಾಡಿಗ, ರಕ್ಷಿತ್ ಪೂಜಾರಿ, ಅಶೋಕ್ ಪೂಜಾರ್, ಚಂದ್ರಹಾಸ ಸನಿಲ್, ಪ್ರವೀಣ್ ಪೂಜಾರಿ ಬೊಳ್ಳೂರು, ಧರ್ಮಾನಂದ ತೋಕೂರು, ಪುತ್ತುಬಾವ ಕಾರ್ನಾಡ್ ಮತ್ತಿತರರು ಇದ್ದರು.