ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಖಂಡನೆ
Wednesday, April 23, 2025
ಕಾಶ್ಮೀರದ ಪಹಲ್ಗಾಂನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೇಳಿದರು.ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೃತರ ಆತ್ಮಕ್ಕೆ ಶಾಂತಿಕೋರುತ್ತೇನೆ. ಈ ಸಂಕಷ್ಟದ ಸಂದರ್ಭದಲ್ಲಿ ನಾವು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇವೆ. ಘಟನೆ ನಡೆದ ಕ್ಷಣದಿಂದ ನಮ್ಮ ಮನಸ್ಸಿನಲ್ಲಿ ಸಹಿಸಲಸಾಧ್ಯವಾದ ನೋವು ಕಾಡುತ್ತಿದೆ. "ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯೇ ಈ ಪ್ರಪಂಚದಲ್ಲಿ?" ಎನ್ನುವ ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳು ಇಲ್ಲಿ ನಮಗೆ ನೆನಪಾಗುತ್ತಿವೆ ಎಂದರು.
ಯಾವುದೇ ಧರ್ಮವಾಗಲಿ ಹಿಂಸೆ, ಕ್ರೂರತೆ, ಕೊಲ್ಲುವುದನ್ನು ಬೆಂಬಲಿಸುವುದಿಲ್ಲ. ದ್ವೇಷದ ಗೋಡೆ ಕಟ್ಟುವ ಬದಲು ತಿಳುವಳಿಕೆಯ ಸೇತುವೆ ಕಟ್ಟಲು ಪ್ರೇರೇಪಿಸುತ್ತದೆ.
ಪಹಲ್ಗಾಂನಲ್ಲಿ ನಡೆದ ಭೀಕರ ಕೃತ್ಯದ ಉದ್ದೇಶ ಭೀತಿ, ದ್ವೇಷ ಹುಟ್ಟಿಸುವುದು, ಧರ್ಮಗಳ ನಡುವೆ ಕಂದಕಗಳನ್ನು ಸೃಷ್ಟಿಸುವುದನ್ನು ಬಿಟ್ಟು ಬೇರೇನೂ ಅಲ್ಲ. "ಮನುಷ್ಯ ಜಾತಿ ತಾನೊಂದೆ ವಲಂ" ಎನ್ನುವ ಆದಿಕವಿ ಪಂಪನ ಮಾತುಗಳನ್ನು ಸ್ಮರಿಸುತ್ತಾ ಈ ಕ್ರೂರ ದಾಳಿಯಲ್ಲಿ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದರು.