ಜ.24,25,26:ವಿಶ್ವ ಸಮ್ಮೇಳನ,ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ,ಸುವರ್ಣ ಸಿರಿ - 2025
ಹಳೆಯಂಗಡಿ:ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಸಿಹಿತ್ಲು ಅಗ್ಗಿದಕಳಿಯದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘವು ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದ್ದು,ವಿಶಿಷ್ಠ ಪರಿಕಲ್ಪನೆಯಲ್ಲಿ ಮೂರು ದಿನಗಳ ಮಹಾಸಮ್ಮೇಳನ ನಡೆಯಲಿದೆ.ಜನವರಿ 24,25 ಹಾಗೂ 26ರಂದು ವಿಶ್ವದಾದ್ಯಂತ ಇರುವ ಬಿಲ್ಲವರು,ತೀಯರು,ಆರ್ಯ ಈಡೀಗ ,ದೀವರು ,ನಾಮಧಾರಿಗಳು ಸೇರಿದಂತೆ ಎಲ್ಲಾ 26ಪಂಗಡಗಳ ವಿಶ್ವ ಸಮ್ಮೇಳನ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ತೇಜೋಮಯ ಅವರು ಹೇಳಿದರು.ಅವರಿಂದು ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.1974 ರಲ್ಲಿ ಸಸಿಹಿತ್ಲು ಗ್ರಾಮದ ಅಗ್ಗಿದಕಳಿಯದ ಹಿರಿಯರ ಮುತುವರ್ಜಿಯಲ್ಲಿ ಸಂಸ್ಥೆ ಆರಂಭವಾಗಿದೆ.ಸಮುದಾಯದ ಯುವ ಮನಸುಗಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪಂಗಡಗಳ ಬಂದುಗಳಿಗಾಗಿ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧೆಗೆ ಪ್ರಥಮ ಬಹುಮಾನ | ಲಕ್ಷ ರೂಪಾಯಿ, ದ್ವಿತೀಯ 50 ಸಾವಿರ, ತೃತೀಯ 40 ಸಾವಿರ, ಚತುರ್ಥ 30 ಸಾವಿರ ಮತ್ತು ಪಂಚಮ ಬಹುಮಾನ 20 ಸಾವಿರ ನಗದು ಸಹಿತ ಶಾಶ್ವತ ಫಲಕ ಇದೆ, ಅದರೊಂದಿಗೆ ಭಾಗವಹಿಸಿ ಬಹುಮಾನ ಪಡೆಯದ ತಂಡಗಳಿಗೆ ತಲಾ ಹತ್ತು ಸಾವಿರ ಪ್ರೋತ್ಸಾಹಕ ನಗದು ನೀಡಲಾಗುವುದು ಎಂದರು. ದೇಶ ವಿದೇಶಗಳಿಂದ ಸಮಾಜದ ಬಂಧುಗಳು ಆಗಮಿಸುವ ಕಾರಣದಿಂದ ಅವರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬೀಚ್ ಫೆಸ್ಟಿವವ್, ಬಿಲ್ಲವರ ಜಾನಪದ ಬದುಕಿನ ಪ್ರದರ್ಶನ, ಪುಸ್ತಕ ಮೇಳ, ಎಲ್ಲವನ್ನೂ ಆಯೋಜಿಸಲಾಗಿದೆ. ಇದು ವಿಶ್ವಾದ್ಯಂತ ಇರುವ ಸಮುದಾಯದ ಜನರ, ಸಿನಿಮಾ ತಾರೆಯರ, ಕ್ರೀಡಾ ತಾರೆಯರ, ಜನಪ್ರತಿನಿಧಿಗಳ ಮಹಾ ಸಂಗಮ. ಬಿಲ್ಲವ, ಆರ್ಯ ಈಡೀಗ, ತೀಯಾ, ದೀವರು ನಾಮಧಾರಿಗಳು ಸೇರಿದಂತೆ 26 ಉಪ ಪಂಗಡಗಳನ್ನು ಹೊಂದಿರುವ ಬಲಿಷ್ಠ ಬಿಲ್ಲವ ಸಮುದಾಯ ಸಾಹಿತ್ಯ, ಸಿನಿಮಾ, ಕ್ರೀಡೆ, ಆರೋಗ್ಯ, ಉದ್ಯಮ, ಐಎಎಸ್ ಹೀಗೆ ಎಲ್ಲಾ ರಂಗದಲ್ಲೂ ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಸಂಘಟನಾತ್ಮಕವಾಗಿಯೂ ಬಲಿಷ್ಠರಾಗಿರುವ ಸಮುದಾಯದ ಬೃಹತ್ ಸಮ್ಮಿಲನ ಇದು, ಮೂರು ದಿನದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಸಭೆಯ ಸಭಾಧ್ಯಕ್ಷ ಯುಟಿ ಖಾದರ್ ಸುವರ್ಣಾಕ್ಷರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸಾಧಕ ಸಮಾಜ ಬಂಧುಗಳಿಗೆ ನೀಡುವ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೇಂದ್ರದ ಮಾಜಿ ಸಚಿವ ಜಿ. ಜನಾರ್ದನ ಪೂಜಾರಿ ಪ್ರದಾನಿಸಲಿದ್ದಾರೆ. ತೆಲಂಗಾಣ ರಾಜ್ಯಪಾಲರಾದ ತಮಿಳ್ ಇಸೈ ಸೌಂದರರಾಜನ್, ಸಚಿವರಾದ ಮಧು ಬಂಗಾರಪ್ಪ, ತೆಲಂಗಾಣದ ಸಚಿವರಾದಪೊನ್ನಂ ಪ್ರಭಾಕರ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನ ಬೀಚ್ ಫೆಸ್ಟಿವಲ್ ಇದ್ದು ಆಹಾರ ಮೇಳ, ಬೀಚ್: ಡ್ಯಾನ್ಸ್ ಸ್ಪರ್ಧೆ, ಬೀಚ್ ವಾಲಿಬಾಲ್, ತ್ರೋ ಬಾಲ್, ಬೀಚ್ ರಸಮಂಜರಿ ಮುಂತಾದ ಕಾರ್ಯಕ್ರಮ ನಿರಂತರ ನಡೆಯಲಿದೆ. ಜನವರಿ 24 ರಂದು ಮಧ್ಯಾಹ್ನ 3.00 ಕ್ಕೆ ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ವರ್ಣರಂಜಿತ ಮೆರವಣಿಗೆ ಹೊರಡಲಿದ್ದು,ಸಂಜೆ 5:30ಕ್ಕೆ ಸುವರ್ಣ ಸಂಭ್ರಮ ಧ್ವಜಾರೋಹಣ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸತ್ಯಜಿತ್ ಸುರತ್ಕಲ್ ,ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷರು, ವಿಶ್ವ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರಾದ ಚಂದಯ್ಯ ಬಿ ಕರ್ಕೇರ, ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದಕಳಿಯದ ಅಧ್ಯಕ್ಷರು, ವಿಶ್ವ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿ.ಎನ್., ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರು, ಸಮ್ಮೇಳನ ಸಮಿತಿ ಕಾರ್ಯದರ್ಶಿ ರಮೇಶ್ ಪೂಜಾರಿ ಚೇಳಾಯಾರು ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘ, ಪ್ರಧಾನ ಸಂಚಾಲಕರಾದ ನರೇಶ್ ಕುಮಾರ್ ಸಸಿಹಿತ್ಲು, ಕಾರ್ಯದರ್ಶಿ ಸುವರ್ಣ ಮಹೋತ್ಸವ ಸಮಿತಿ, ಸಂಚಾಲಕರು ವಿಶ್ವ ಸಮ್ಮೇಳನ ಸಮಿತಿ ಎಸ್.ಆರ್. ಪ್ರದೀಪ್, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಕೋಶಾಧಿಕಾರಿ ವಸಂತ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷರು ಸರೋಜಿನಿ ಶಾಂತರಾಜ್, ವಿಶ್ವ ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕರು ಉದಯ ಬಿ.ಸುವರ್ಣ, ಕೋಶಾಧಿಕಾರಿ ಕಿರಣ್ ಕುಮಾರ್, ಸುವರ್ಣ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಭಾಸ್ಕರ ಕೋಟ್ಯಾನ್, ಪ್ರಚಾರ ಸಮಿತಿಯ ಮುಕೇಶ್, ಮಾಧ್ಯಮ ಸಮಿತಿಯ ಯಶೋಧರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.