ಮೂಲ್ಕಿ ರೈಲ್ವೇ ನಿಲ್ದಾಣದಲ್ಲಿ 1.62 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
Thursday, January 30, 2025
ಮೂಲ್ಕಿ:ದಕ್ಷಿಣ ಕನ್ನಡ ಉಡುಪಿ ಉತ್ತರ ಕರ್ನಾಟಕದ ಮೂಲಕ ಹಾದು ಹೋಗಿರುವ ಕೊಂಕಣ್ ರೈಲ್ವೆಯ ಎಲ್ಲಾ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ ನೀಡಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ನನ್ನ ಲೋಕಸಭಾ ಕ್ಷೇತ್ರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಹಲವಾರು ಬೇಡಿಕೆಗಳಿದ್ದು ವಿಶೇಷ ಕಾರ್ಯ ಯೋಜನೆಯ ಮೂಲಕ ಸೂಕ್ತ ಪರಿಹಾರ ನೀಡಿ ಅಭಿವೃದ್ಧಿ ಪಡಿಸಲಾಗುವುದು, ಮೂಲ್ಕಿಯ ರೈಲ್ವೆ ನಿಲ್ದಾಣದಲ್ಲಿ 1.62 ಕೋ.ರೂ. ವೆಚ್ಚದ ಫ್ಲ್ಯಾಟ್ ಫಾರ್ಮ್ ವಿಸ್ತರಣೆ, ಮೇಲ್ಚಾವಣಿ, ರಸ್ತೆ ಅಭಿವೃದ್ಧಿಯ ಮೊದಲ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಅವರು ಮೂಲ್ಕಿ ರೈಲ್ವೇ ನಿಲ್ದಾಣದಲ್ಲಿ 1.62 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಳೆಯಂಗಡಿ ಇಂದಿರಾ ನಗರದ ರೈಲ್ವೆ ಕ್ರಾಸಿಂಗ್ ಗೆ ಶೀಘ್ರ ಮುಕ್ತಿ ನೀಡಬೇಕು, ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್ ನ ಕೌಂಟರ್ ಮರು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನ ಸಲ್ಲಿಸಿ, ಮೂಲ್ಕಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದ ಕೆ. ಎಸ್. ರಾವ್ ನಗರದ ಕೋರ್ದಬ್ಬು ದೈವಸ್ಥಾನದ ಬಳಿಯಿಂದ ಕೆಂಚನಕೆರೆ ತಿರುವಿನವರೆಗೆ 80 ಲಕ್ಷ ರೂ. ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿ ಶೀಘ್ರದಲ್ಲಿಯೇ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಲ್ಕಿ ನಾಗರಿಕರ ಪರವಾಗಿ ಹರೀಶ್ ಪುತ್ರನ್ ಹಾಗೂ ಗೋಪಿನಾಥ್ ಪಡಂಗ ಇವರ ನಿಯೋಗವು ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಪರಿಹಾರ ನೀಡಲು ಬೇಡಿಕೆಯನ್ನು ಸಲ್ಲಿಸಿದರು.
ಕೊಂಕಣ್ ರೈಲ್ವೆಯ ಆಶಾ ಶೆಟ್ಟಿ, ಸುಧಾಕೃಷ್ಣ ಮೂರ್ತಿ, ಉದ್ಯಮಿ ಅರವಿಂದ ಪೂಂಜ, ಮೂಲ್ಕಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಸತೀಶ್ ಅಂಚನ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕಾಸ್ ಶೆಟ್ಟಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ವಿವಿಧ ಗ್ರಾಮ ಪಂಚಾಯತಿನ ಅಧ್ಯಕ್ಷರು, ಸದಸ್ಯರು, ನಾಗರಿಕರು ಇದ್ದರು.