-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮೂಲ್ಕಿ ಸೀಮೆ ಅರಸು ಕಂಬಳ

ಮೂಲ್ಕಿ ಸೀಮೆ ಅರಸು ಕಂಬಳ


ಮೂಲ್ಕಿ ಸೀಮೆಯ ಅರಸು ಕಂಬಳ ತುಳುನಾಡಿನ ಇತಿಹಾಸದಲ್ಲಿ ಪ್ರಸಿದ್ಧವಾದ ಕಂಬಳಗಳಲ್ಲಿ ಒಂದು. ತುಳುನಾಡನ್ನು ಆಳಿದ ಮೊದಲ ರಾಜಮನೆತನವಾದ ಆಲೂಪರ ಕಾಲದಿಂದಲೇ ಮೂಲ್ಕಿ ಸೀಮೆಯನ್ನು ಆಳುತ್ತಾ ಬಂದಿರುವ ಮೂಲ್ಕಿ ಅರಸು ಮನೆತನವು ಕಳೆದ ನಾಲ್ಕು ನೂರು ವರುಷಗಳಿಂದ ಅನುಚಾನವಾಗಿ ಕಂಬಳವನ್ನು ನಡೆಸುತ್ತಾ ಬಂದಿರುವುದರಿಂದ ಈ ಕಂಬಳಕ್ಕೆ ತುಳುನಾಡಿನ ಚರಿತ್ರೆಯಲ್ಲಿ ಪ್ರತ್ಯೇಕವಾದ ಸ್ಥಾನವಿದೆ. ಪ್ರತಿ ವರ್ಷ ಅರಸರ ತಾರಭಲಕ್ಕೆ ಅನುಗುಣವಾಗಿ ದಿನಾಂಕ ನಿರ್ಧರಿಸಿ ಅರಮನೆಯ ಎದುರಿಗಿರುವ ಬಾಕಿಮಾರು ಗದ್ದೆಯಲ್ಲಿ ಕಂಬಳವನ್ನು ನಡೆಸಲಾಗುತ್ತದೆ. ಮೂಲ್ಕಿ ಸೀಮೆ ಅರಸು ಕಂಬಳವು ಈ ಬಾರಿ ಮೂಲ್ಕಿ ಸೀಮೆಯ ಈಗಿನ ಅರಸರಾಗಿರುವ ಶ್ರೀ ಎಂ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಡಿಸೆಂಬರ್ 22 ರಂದು ಎಲ್ಲಾ ವರ್ಷಗಳಂತೆ ವೈಭವೋಪೇತವಾಗಿ ನಡೆಯಲಿದೆ.

ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಕೃಷಿ ಆಧರಿತವಾದ ಈ ಕ್ರೀಡೆಗಿರುವ ಪ್ರಾಮುಖ್ಯತೆ ಮತ್ತು ಅದು ಜನಮಾನಸದ ಹೃದಯದಲ್ಲಿ ಇಳಿದಿರುವ ಆಳ ಮತ್ತು ಅಗಲವನ್ನು ಅರಿತಿದ್ದ ಮೂಲ್ಕಿಯ ಸಾವಂತರು ನಾಲ್ಕು ನೂರು ವರ್ಷಗಳ ಹಿಂದೆಯೇ ತಮ್ಮ ಪ್ರಜೆಗಳಾದ ರೈತಾಪಿಗಳನ್ನು ಅವರ ಬೇಸಾಯದ ಕೆಲಸಗಳು ಮುಗಿದ ಬಳಿಕ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಹಾಗೂ ದೈಹಿಕವಾಗಿ ಸದೃಢರಾಗಿರಲು ಮತ್ತು ಅಲಸಿಗಳಾಗದೇ ಕಾರ್ಯತತ್ಪರಾಗಿರಲು ಪ್ರಾರಂಭಿಸಿದ ಕೃಷಿ ಸಂಸ್ಕೃತಿಯ ಹಿನ್ನಲೆಯ ಈ ಕ್ರೀಡೆ, ಅದರಲ್ಲಿಯೂ ಮೂಲ್ಕಿ ಸೀಮೆ ಅರಸು ಕಂಬಳವು ಇಂದು ಅಬಾಲವೃದ್ಧರಾಗಿ ಎಲ್ಲರನ್ನು ಆಕರ್ಷಿಸಿದೆ ಮತ್ತು ನಾಡು, ಜಲ, ನೆಲದೊಡನೆ ಯುವಕರನ್ನು ವಿಶೇಷವಾಗಿ ಮಹಿಳೆಯರನ್ನು ಬೆಸೆಯುವಲ್ಲಿ ಯಶಸ್ವಿಯಾಗಿದೆ.

ಶಿಮಂತೂರು ಮೂಲದ ಒಂಬತ್ತು ಮಾಗಣೆಯ ಅರಸರಾದ ಸಾವಂತರು ಪಡುಪಣಂಬೂರಿನಲ್ಲಿ ತಮ್ಮ ಅರಮನೆಯನ್ನು ನಿರ್ಮಿಸಿದಾಗ ಪಣಂಬೂರಿನಲ್ಲಿ ನಡೆಯುತ್ತಿದ್ದ ಕಂಬಳದ ಮಾದರಿಯಲ್ಲಿ ಈ ಕ್ರೀಡೆಯನ್ನು ತಮ್ಮ ಸೀಮೆಯಲ್ಲೂ ಪ್ರಾರಂಭಿಸಬೇಕು ಎಂಬ ಧೃಡ ನಿಶ್ಚಯದೊಂದಿಗೆ ಪಣಂಬೂರಿನ ಕಂಬಳ ಗದ್ದೆಯ (ಕಂಬುಲದ) ಹಿಡಿಮಣ್ಣನ್ನು ಪಡುಪಣಂಬೂರಿನ ಬಾಕಿಮಾರು ಗದ್ದೆಯಲ್ಲಿ ಬೆರಸಿ ನಾಲ್ಕು ನೂರು ವರ್ಷಗಳ ಹಿಂದೆ ಪ್ರಥಮ ಕಂಬಳಕ್ಕೆ ಅಂದಿನ ಅರಸರು ಚಾಲನೆ ನೀಡಿದರು. ಮೂಲದಲ್ಲಿ ಒಳಲಂಕೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಇಂದಿನ ಪಡುಪಣಂಬೂರು ಈಗಿನ ಈ ಹೆಸರನ್ನು ಪಡೆಯಲು ಕಾರಣವಾಗಿರುವುದು ಈ ಚಾರಿತ್ರಿಕ ಘಟನೆ ಎಂಬ ಪ್ರತೀತಿಯಿದೆ. ತಮ್ಮ ಸೀಮೆಯ ಅಧೀನ ಗುತ್ತು ಬಾವದ ಮನೆತನಗಳನ್ನು ಜೊತೆ ಸೇರಿಸಿ, ಎಲ್ಲಾ ರೈತಾಪಿ ಜನರ ಸಹಕಾರದೊಂದಿಗೆ ನಡೆದು ಬರುತ್ತಿದ್ದ ಮೂಲ್ಕಿ ಸೀಮೆಯ ಅರಸು ಕಂಬಳವು ತುಳುವರು ಅಭಿಮಾನ ಮತ್ತು ಪ್ರೀತಿಯಿಂದ ಕಾಣುತ್ತಿದ್ದ ಅಜಾನುಬಾಹು ಆಗೋಳಿ ಮಂಜಣ್ಣ ಸಮೇತರಾಗಿ ಸಾವಿರಾರು ಜನರ ಅಕರ್ಷಣೆಯ ಕಾರ್ಯಕ್ರಮವಾಗಿತ್ತು. ಕಂಬಳ ನಡೆಯವ ಒಂದು ತಿಂಗಳು ಕಂಬಳ ಗದ್ದೆಯ ಅಸುಪಾಸಿನಲ್ಲಿ ದೊಡ್ಡ ಪ್ರಮಾಣದ ಸಂತೆ ನಡೆಯುತ್ತಿದ್ದು ಜಾತ್ರೆಯ ಪ್ರಮಾಣದಲ್ಲಿ ಜನ ಸೇರುತ್ತಿದ್ದರು. ಆ ಕಾಲದಲ್ಲಿ ಜನರು ಒಂದು ವರ್ಷಕ್ಕೆ ತಮ್ಮ ಮನೆಗಳಿಗೆ ಬೇಕಾದ ಕೃಷಿ ಸಂಬಂಧಿ ಸರಕು ಸಾಮಗ್ರಿಗಳನ್ನು ಮತ್ತು ಉಪಕರಣಗಳನ್ನು ಕೊಂಡುಕೊಳ್ಳುತ್ತಿದ್ದರು. ನಿರಂತರವಾಗಿ ಅರಮನೆಯು ತನ್ನ ಒಡೆತನದಲ್ಲಿದ್ದ ಕೃಷಿ ಭೂಮಿಯ ಆದಾಯದಿಂದ ಈ ಕಂಬಳವನ್ನು ನಡೆಸಿಕೊಂಡು ಬಂದಿದ್ದು. ಕಾಲಕ್ರಮದಲ್ಲಿ ನಡೆದ ಸಾಮಾಜಿಕ ಪಲ್ಲಟಗಳಿಂದ, ಆರ್ಥಿಕ ಮತ್ತು ರಾಜಕೀಯ ಚಲನೆಯಿಂದಾಗಿ ತನ್ನ ಒಡೆತನದಲ್ಲಿದ್ದ ಹೆಚ್ಚಿನ ಕೃಷಿ ಭೂಮಿಯನ್ನು ಕಳೆದುಕೊಂಡ ಸಂದರ್ಭದಲ್ಲೂ ಕಂಬಳದ ವೈಭವ ಮತ್ತು ಘನತೆಗೆ ಯಾವ ಕುಂದೂ ಬರದಂತೆ ಸಾವಂತ ಅರಸು ಮನೆತನವು ಕಂಬಳವನ್ನು ನಡೆಸಿಕೊಂಡು ಬಂದಿರುವುದು ಕಂಬಳದ ಕುರಿತಾದ ಅರಸರ ಪ್ರೀತಿ ಮತ್ತು ಅದರಕ್ಕೆ ದೃಷ್ಟಾಂತವಾಗಿ ನಮ್ಮ ಕಣ್ಣ ಮುಂದಿದೆ.

1974 ರಲ್ಲಿ ಅರಮನೆಯ ಅಭಿಮಾನಿಗಳಾಗಿದ್ದ ಕಾಸಪ್ಪಯ್ಯರ ಮನೆ ವೆಂಕಟರಮಣಯ್ಯ, ಪಂಜದಗುತ್ತು ಶಂಭು ಮಲ್ಲಿ, ಮುಲ್ಕಿಯ ಎಂ. ಆರ್. ಪೂಂಜಾ, ಕೊಲ್ನಾಡುಗುತ್ತು ವಾಮನ ಶೆಟ್ಟಿ, ಕೊಲ್ನಾಡು ತಿಮ್ಮಯ್ಯ ಶೆಟ್ಟಿ, ಮಂಟ್ರಾಡಿ ಸುಬ್ಬಣ್ಣಯ್ಯ ಮೊದಲಾದವರು ಸಹಿತರಾಗಿ ಹಲವರು ಕಂಬಳವನ್ನು ಮತ್ತಷ್ಟು ಆಕರ್ಷಕಗೊಳಿಸಲು ಮತ್ತು ಕಂಬಳದಲ್ಲಿ ಎಲ್ಲಾ ವರ್ಗದ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹಾಗೂ ಕಂಬಳದ ಸ್ಪರ್ಧಿಗಳನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಅರಸರಿಗೆ ಸಹಾಯಕರಾಗುವ ಉದ್ದೇಶದಿಂದ ತಂಡವೊಂದನ್ನು ಕಟ್ಟಿಕೊಂಡು ಅರಸರಿಗೆ ಸಹಕಾರಿಗಳಾಗಿ ಜೊತೆ ನಿಂತರು. ನಂತರದ ಅವಧಿಯಲ್ಲಿ ಕೆಲಸ ಮಾಡಿದ ಪೈಯೊಟ್ಟು ಸದಾಶಿವ ಸಾಲ್ಯಾನ್, ಎಡೈಮಾರ್ ಶ್ರೀಧರ ಶೆಟ್ಟಿ, ಉತ್ರುಂಜೆ ಭುಜಂಗ ಶೆಟ್ಟಿ, ಪಂಜದಗುತ್ತು ಶಾಂತರಾಮ ಶೆಟ್ಟಿ, ಕೊಲ್ನಾಡು ಗುತ್ತು ರಾಮಚಂದ್ರ ನಾಯಕ್ ಮೊದಲಾದವರ ಸೇವೆ ಮರೆಯುವಂತಿಲ್ಲ, ಈ ಪರಿಪಾಟವು ಇಂದೂ ಮುಂದುವರಿಯುತ್ತಿದ್ದು ಅರಸರಿಗೆ ಕಂಬಳವನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಈ ಸಾಲಿನ ಕಂಬಳದಲ್ಲಿ ಕೊಲ್ನಾಡು ಗುತ್ತು ಕಿರಣ್ ಶೆಟ್ಟಿ ಅವರು ಈ ತಂಡದ ನೇತೃತ್ವವಹಿಸಿದ್ದು ಈ ತಂಡವು ಕಂಬಳವನ್ನು ಯಶಸ್ವಿಗೊಳಿಸುವಲ್ಲ ಅಹರ್ನಿಷಿಯಾಗಿ ದುಡಿಯುತ್ತಿದೆ.

ಕಂಬಳವು ತುಳುನಾಡಿನ ಕೃಷಿ ಮೂಲದ ಕ್ರೀಡೆಯಾಗಿದ್ದು, ನಮ್ಮ ನೆಲ ಜಲದ ಬಗ್ಗೆ ಅಭಿಮಾನ ಕುಂದುತ್ತಿರುವ ಸಮಕಾಲಿನ ಪ್ರಪಂಚದಲ್ಲಿ ಯುವಜನತೆಯನ್ನು ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಅಂತರಾಳದೊಳಗೆ ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎಂಬುವುದರಲ್ಲಿ ಸಂಶಯವಿಲ್ಲ ಈ ನಿಟ್ಟಿನಲ್ಲಿ ಮೂಲ್ಕಿ ಸೀಮೆ ಅರಸು ಕಂಬಳವು ಯಶಸ್ವಿಯಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ