ಮೂಲ್ಕಿ ಯುವವಾಹಿನಿ ಘಟಕದಿಂದ ಆಟಿಡೊಂಜಿ ದಿನ ಕಾರ್ಯಕ್ರಮ
Sunday, July 28, 2024
ಮೂಲ್ಕಿ:ಕಳೆದ 22 ವರ್ಷದ ಹಿಂದೆ ಮೂಲ್ಕಿಯಲ್ಲಿ ಯುವವಾಹಿನಿ ಸಂಸ್ಥೆಯ ಮೂಲಕ ಆರಂಭಗೊಂಡ ಆಟಿಡೊಂಜಿ ದಿನ ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇಂದು ವಿಶ್ವವ್ಯಾಪ್ತಿಯಾಗಿದ್ದು ವಿಶೇಷವಾಗಿದೆ. ಕೃಷಿ ಬದುಕನ್ನು ತೆರೆದ ಪುಸ್ತಕದಂತೆ ಕಾರ್ಯಕ್ರಮ ನಡೆಯಬೇಕು, ಮುಂದಿನ ಪೀಳಿಗೆಗೆ ಕೃಷಿ, ಗ್ರಾಮೀಣ ಭಾಗದ ಪರಂಪರೆಯನ್ನು ವಿಸ್ತರಿಸುವ ಕೆಲಸ ಮಾಡಬೇಕು ಎಂದು ಭಾರತ್ ಬ್ಯಾಂಕ್ ನ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿ ಯುವವಾಹಿನಿ ಘಟಕದಿಂದ ಭಾನುವಾರ ಇಪ್ಪತ್ತೆರಡನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೇದಿಕೆಯಲ್ಲಿ ನಿರ್ಮಿಸಿದ ಬಾವಿಯಿಂದ ನೀರು ಸೇದುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಯುವವಾಹಿನಿ ಅಧ್ಯಕ್ಷ ರಿತೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.
ಮೂಡಬಿದಿರೆಯ ಆಳ್ವಾಸ್ನ ಉಪನ್ಯಾಸಕ ಯೋಗೀಶ್ ಕೈರೋಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಉದ್ಯಮಿ ಲೋಕೇಶ್ ಅಮೀನ್, ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ನಿರ್ದೇಶಕಿ ರಾಜೇಶ್ವರೀ, ಕಾರ್ಯದರ್ಶಿ ಲತೀಶ್ ಕಾರ್ನಾಡ್, ಉದಯ ಅಮೀನ್, ನರೇಂದ್ರ, ಜಯಕುಮಾರ್ ಮತ್ತಿತರರು ಇದ್ದರು.