ಎಸ್ ಆರ್ ಎಸ್ ಮೀಡಿಯಾ ಹೌಸ್ ಅರ್ಪಿಸುವ "ಅವನಿ" ಧಾರಾವಾಹಿಯ ಚಿತ್ರೀಕರಣ
Sunday, June 9, 2024
"ಅವನಿ" ಧಾರಾವಾಹಿಗೆ ಮಹೂರ್ತ, ಚಿತ್ರೀಕರಣ ಆರಂಭ
ಮಂಗಳೂರು : ಎಸ್ ಆರ್ ಎಸ್ ಮೀಡಿಯಾ ಹೌಸ್ ಅರ್ಪಿಸುವ "ಅವನಿ" ಧಾರಾವಾಹಿಯ ಮುಹೂರ್ತವು ಮೂಡಬಿದ್ರೆ ಸಮೀಪದ ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಈಗಾಗಲೇ ನಡೆದಿದ್ದು,ಚಿತ್ರಿಕರಣವು ಆರಂಭಗೊಂಡಿದೆ.
ದೇವಸ್ಥಾನದಲ್ಕಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕ್ಯಾಮರಾಕ್ಕೆ ಚಾಲನೆ ನೀಡಿ ಮಾತನಾಡಿ, "ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಚಿತ್ರೀಕರಣ ಆರಂಭಿಸಿದ ಹೊಸಬರ ಧಾರಾವಾಹಿ ತಂಡದ ಪ್ರಯತ್ನ ಯಶಸ್ವಿಯಾಗಲಿ, ಕುಟುಂಬ ಜೊತೆಯಲ್ಲಿ ಕೂತು ನೋಡುವಂತಹ ಧಾರಾವಾಹಿ ನಿರ್ಮಾಣವಾಗಲಿ" ಎಂದು ಶುಭ ಹಾರೈಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, "ಕರಾವಳಿಯ ಪ್ರತಿಭೆಗಳು ಸೇರಿ ಮೊದಲ ಬಾರಿಗೆ ಕನ್ನಡ ಧಾರಾವಾಹಿ ನಿರ್ಮಾಣ ಮಾಡುವ ಸಾಹಸಕ್ಕೆ ಇಳಿದಿದ್ದಾರೆ. ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಧಾರಾವಾಹಿ ಮೂಲಕ ಹಲವು ಕಲಾವಿದರಿಗೆ ಉತ್ತಮ ಭವಿಷ್ಯ ಸಿಗಲಿ" ಎಂದು ಶುಭಹಾರೈಸಿದರು.
ಚಿತ್ರನಟಿ ಮಾಡೆಲ್ ವೆನ್ಸಿಟಾ ಡಯಾಸ್, ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಕೊಲ್ನಾಡುಗುತ್ತು, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು- ಕಲ್ಕುಡೆ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
"ಅವನಿ" ಧಾರವಾಹಿಗೆ ಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಪತ್ರಕರ್ತ ಶಶಿ ಬೆಳ್ಳಾಯರು ಹೊತ್ತಿದ್ದಾರೆ. ಛಾಯಾಗ್ರಹಣ ಮನೋಹರ ಶೆಟ್ಟಿ ಸುರತ್ಕಲ್, ಸಹನಿರ್ದೇಶನ ಗಿರೀಶ್ ಮಳಲಿ, ನಿರ್ವಹಣೆ ಹಾಗೂ ಸಹ ನಿರ್ದೇಶನ - ಸೋನು ನೆಲ್ಲಿಗುಡ್ಡೆ ಇವರದ್ದಾಗಿದೆ. ಧಾರವಾಹಿಯ ಕಾರ್ಯಕಾರಿ ನಿರ್ಮಾಪಕರಾಗಿ ಸುಜಿತ್ ಕುಮಾರ್, ಸಲಹೆ ಸಹಕಾರ ದಿನೇಶ್ ಸುವರ್ಣ ಅವರದ್ದಾಗಿದೆ. ಮಂಗಳೂರು, ಮೂಡಬಿದ್ರೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದು ಧಾರಾವಾಹಿ ತಂಡ ಮಾಹಿತಿ ನೀಡಿದೆ.