ಜ.19 - 21ಗುರುಪುರ ಗೋಳಿದಡಿಗುತ್ತಿನ `ಗುತ್ತುದ ವರ್ಸೊದ ಪರ್ಬೊ'
Tuesday, January 16, 2024
ಗುರುಪುರ : ಗುರುಪುರ ಗೋಳಿದಡಿಗುತ್ತಿನ `ಗುತ್ತುದ ವರ್ಸೊದ ಪರ್ಬೊ' ಜ. 19ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಜ. 19ರಂದು ಶ್ರೀ ವೈದ್ಯನಾಥೇಶ್ವರ ಪಂಚದೇವತೆಗಳ ಆರಾಧನೆ, ನಾಂದಿ, ಗಣಹೋಮ, ಬೆಳಿಗ್ಗೆ 9ರಿಂದ ವಿವಿಧ ರೀತಿಯ ಸರಕುಗಳ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ, ಸಂಜೆ 4-10ರವರೆಗೆ ಚರುಮುರಿ ಮೇಳ, ಸಂಜೆ 7ರಿಂದ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಮೇಳದವರಿಂದ ಗಣೇಶ್ ಕೊಲಕ್ಕಾಡಿ ವಿರಚಿತ `ಸತಿ ಸತ್ಯವತಿ' ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಜ. 20ರಂದು ಶ್ರೀ ವೈದ್ಯನಾಥೇಶ್ವರ ಪಂಚ ದೇವತೆಗಳ ಆರಾಧನೆ, ಪನಿವಾರ ಸಮರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಬ್ರಹ್ಮಶ್ರೀ ಕೆ. ಎಸ್. ನಿತ್ಯಾನಂದ ಗುರುಗಳ ಗುರು ಸಾನಿಧ್ಯದಲ್ಲಿ `ಗುತ್ತಿನ ವರ್ಷದ ಒಡ್ಡೋಲಗ' ನಡೆಯಲಿದೆ. ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವ ಒಡ್ಡೋಲಗದಲ್ಲಿ ನಿವೃತ್ತ ಪ್ರಾಧ್ಯಪಕ ಡಾ. ಬಿ. ವಿ. ಕುಮಾರಸ್ವಾಮಿ ಮೈಸೂರು ದೀಪ ಬೆಳಗಿಸಲಿದ್ದಾರೆ. ತಿಂಗಳೆಬೀಡಿನ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಅವರು ದಿಕ್ಸೂಚಿ ಮಾತನಾಡಲಿದ್ದಾರೆ. ಬೆಳ್ಳಿಬೆಟ್ಟುಗುತ್ತು ಸತೀಶ್ ಕಾವ, ಯಾದವ ಕೋಟ್ಯಾನ್ ಪೆರ್ಮುದೆ, ಉಪನ್ಯಾಸಕಿ ಅರ್ಪಿತಾ ಎಸ್. ಶೆಟ್ಟಿ ಉದ್ಯಾವರ ಉಪಸ್ಥಿತಲಿರುವರು. ಜ. 20 ಮತ್ತು 21ರಂದು ಸಂಜೆ 6ರಿಂದ 8 ಗಂಟೆಯವರೆಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶಕ್ತಿಕಲ್ಲು ಎತ್ತುವ ಸ್ಪರ್ಧೆ ಹಾಗೂ ರಾತ್ರಿ 8ರಿಂದ ಮಂಗಳೂರು ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿ ಎಸ್. ಮತ್ತು ವಿದುಷಿ ಶ್ರೀಲತಾ ಎನ್. ಇವರ ಶಿಷ್ಯೆಯರಿಂದ `ಭರತನಾಟ್ಯ' ಪ್ರದರ್ಶನ ಆಯೋಜಿಸಲಾಗಿದೆ.
ಜ. 21ರಂದು ಬೆಳಿಗ್ಗಿನ ದೇವತಾ ಕಾರ್ಯದ ಬಳಿಕ ತೀರ್ಥಕೆರೆ ಪೂಜೆ, ದೀಪೋತ್ಸವ, ಸಂಜೆ 6ರಿಂದ 7ರವರೆಗೆ ಗುರುಪುರದ ಎಂಜಿಎಂ ತಾಲೀಮು ಬಳಗದಿಂದ ತಾಲೀಮು ಪ್ರದರ್ಶನ. 7ರಿಂದ 8ರವರೆಗೆ ಶ್ರೀ ಭಗವದ್ಗೀತೆ ವಿಷಯದಲ್ಲಿ ಜ್ಞಾನ ಸಿಂಚನ. ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಎ. ಕುಮಾರಸ್ವಾಮಿ ಮೈಸೂರು ಇವರಿಂದ ಉಪನ್ಯಾಸ. ರಾತ್ರಿ 8:30ರಿಂದ ದಕ್ಷಿಣ ಭಾರತದ ಮುಹಮ್ಮದ್ ರಫಿ ಖ್ಯಾತಿಯ ಠಾಗೋರ್ ದಾಸ್ ಅವರಿಂದ `ಏಕ್ ಶ್ಯಾಮ್ ರಫೀಕೆ ನಾಮ್' ರಸಮಂಜರಿ ಜರುಗಲಿದೆ. ಈ ಮೂರು ದಿನ ಮಧ್ಯಾಹ್ನ 1:30ರಿಂದ 3:30ರವರೆಗೆ ಭಜನಾ ಸತ್ಸಂಗ, ಕುಣಿತ ಭಜನೆ ಹಾಗೂ ನಿರಂತರ ಊಟೋಪಚಾರ ನಡೆಯಲಿದೆ ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಗುತ್ತಿನ ವರ್ಷದ ಪರ್ಬದಲ್ಲಿ ಚರುಮುರಿಗೆ ಮಹತ್ವ ನೀಡಲಾಗಿದ್ದು, ಕೂಪನ್ ಪದ್ಧತಿಯಂತೆ ಗ್ರಾಹಕರಿಗೆ ಇಷ್ಟವಾದ ಚರುಮುರಿ ಲಭ್ಯವಾಗಲಿದೆ.ಅಲ್ಲದೆ ಎಲ್ಲ ಅಂಗಡಿಗಳಲ್ಲಿ ಚರುಮುರಿಗೆ ಸಮಾನ ದರ ನಿಗದಿಪಡಿಸಲಾಗಿದೆ.ಈ ಬಾರಿಯ ಪರ್ಬದಲ್ಲಿ ಚರುಮುರಿ ಮತ್ತು ತಾಲೀಮು ಪರಿಚಯವಾಗುತ್ತಿದೆ ಎಂದು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದ್ದಾರೆ.