“ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ!” -ಡಾ.ಕೆ.ಪ್ರಕಾಶ್ ಶೆಟ್ಟಿ - ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ಪ್ರದಾನ
ಮುಲ್ಕಿ: ಧೀಮಂತ ವ್ಯಕ್ತಿ ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರಿನಲ್ಲಿ ಟ್ರಸ್ಟ್ ಅಧ್ಯಕ್ಷನಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ. ಸುಂದರ ರಾಮ ಶೆಟ್ಟಿಯವರ ಸ್ಮರಣಾರ್ಥ ಭವನವನ್ನು ನಿರ್ಮಿಸಲು ನನ್ನನ್ನು ಸಂಚಾಲಕನನ್ನಾಗಿ ಆಯ್ಕೆ ಮಾಡಿದ್ರು ಆಗ ಅದನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡವನು ನಾನು. ನಂತರ ನಾಲ್ಕು ವರ್ಷಗಳ ಹಿಂದೆ ಮುಲ್ಕಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಭವನವನ್ನು ನಿರ್ಮಾಣ ಮಾಡಲಾಯಿತು. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ. ಅವರಿಂದ ಎಷ್ಟೋ ಕುಟುಂಬಗಳಿಗೆ ನೆಮ್ಮದಿ ಸಿಕ್ಕಿದೆ. ಇಲ್ಲಿ ಸಹಾಯಹಸ್ತ ಸ್ವೀಕರಿಸಿದವರು ಮುಂದೆ ತಾವೂ ಕೂಡ ಸುಂದರ ರಾಮ ಶೆಟ್ಟಿಯವರಂತಾಗಬೇಕು. ನಾವು ಮಾಡುವ ಸಂಪಾದನೆ ಸಮಾಜಕ್ಕೆ ದಾರಿದೀಪವಾಗಬೇಕು“ ಎಂದು
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು.ಅವರು
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ನಡೆದ ಸಹಾಯ ಹಸ್ತ ಪ್ರದಾನ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ದೀಪಪ್ರಜ್ವಲನೆ ಗೊಳಿಸಿ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದ. ಕ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ “ಜೀವನದಲ್ಲಿ ಸಹಾಯಹಸ್ತ ಎನ್ನುವುದು ಎಲ್ಲರಿಗೂ ಅವಶ್ಯಕವಾಗಿರುತ್ತದೆ. ಜೀವನದಲ್ಲಿ ಸೋತಾಗ ನೊಂದಾಗ ಯಾರಾದರೂ ನಮಗೆ ನೆರವು ನೀಡಬೇಕು ಎನ್ನುವ ಆಶಯವಿರುತ್ತದೆ. ಆಗ ನಮ್ಮನ್ನು ಕೈಹಿಡಿದು ಮೇಲಕ್ಕೆ ಎತ್ತಿದವರನ್ನು ನಾವು ಯಾವತ್ತೂ ಮರೆಯಬಾರದು. ಇಲ್ಲಿ ಆರ್ಥಿಕ ನೆರವು ಪಡೆದವರು ಮುಂದೆ ಜೀವನದಲ್ಲಿ ಇನ್ನಷ್ಟು ಮಂದಿಗೆ ಸಹಾಯಹಸ್ತ ಚಾಚುವಂತಾಗಬೇಕು” ಎಂದರು.
ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ ಉಮಾನಾಥ್ ಕೋಟ್ಯಾನ್ ಮಾತನಾಡಿ , “ಪ್ರಕಾಶ್ ಶೆಟ್ಟಿ ಅವರು ಶ್ರೀಮಂತರೆನ್ನುವುದಕ್ಕಿಂತ ಜಾಸ್ತಿ ಹೃದಯ ಶ್ರೀಮಂತಿಕೆ ಉಳ್ಳವರು. ಸದಾಕಾಲ ತಮ್ಮ ಊರಿನ ಜನರ ಸಂಕಷ್ಟಕ್ಕೆ ಮಿಡಿಯುವ ಅವರಿಗೆ ದೇವರು ಆಯುಷ್ಯ, ಅರೋಗ್ಯ ಕೊಟ್ಟು ಕಾಪಾಡಬೇಕು“ ಎಂದರು.
ದೈಜಿ ವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ “ಮುಲ್ಕಿ ಸುಂದರ ರಾಮ ಶೆಟ್ಟಿಯವರಂತೆಯೇ ಬದುಕುತ್ತಿರುವ ಪ್ರಕಾಶ್ ಶೆಟ್ಟಿ ಅವರದ್ದು ಅಪರೂಪದ ವ್ಯಕ್ತಿತ್ವ. ಇಂದಿಲ್ಲಿ ಸಹಾಯಹಸ್ತ ಪಡೆದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಸಾಧನೆಯನ್ನು ಮಾಡಿ ಸಮಾಜದ ಇನ್ನಷ್ಟು ಜನರಿಗೆ ನೆರವಾಗಬೇಕು” ಎಂದರು.
ವೇದಿಕೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಸುಪುತ್ರ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಇದರ ಟ್ರಸ್ಟಿ ಬಾಲಕೃಷ್ಣ ಹೆಗ್ಡೆ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ದೇವರನ್ನು ಸ್ತುತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಹಾಗೂ ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ಗುರ್ಮೆ ವಂದಿಸಿದರು.