Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಮೂರು ದಿನಗಳ ನುಡಿಹಬ್ಬ ಭ್ರಮರ-ಇಂಚರಕ್ಕೆ ಚಾಲನೆ

 
ಕಟೀಲು:ಟಿ.ವಿ.ಯಲ್ಲಿ ಮಾತನಾಡಿದರೇ ದೊಡ್ಡ ವ್ಯಕ್ತಿಯಾಗುವುದಿಲ್ಲ.  ಸಮಾಜದ ಕಡೆಗೆ ತುಡಿತ-ಮಿಡಿತ ಇರಬೇಕು, ಎಷ್ಟೇ ತಿಳುವಳಿಕೆಯಿದ್ದರು ನಮ್ಮ ನಡೆ-ನುಡಿ ಮುಖ್ಯವಾಗಿದೆ. ಸಮಾಜದಲ್ಲಿ ನಮ್ಮನ್ನು ಗುರುತಿಸುವಂತಾಗಬೇಕು, ಮಾತಿಗೆ ಹೆಚ್ಚು ಮಹತ್ವ ಇಲ್ಲ ವಯಕ್ತಿಕ ನಡವಳಿಕೆ ಸಮಾಜದಲ್ಲಿ ಗುರುತಿಸುತ್ತದೆ ಎಂದು ಟಿ.ವಿ.ನಿರೂಪಕ ರಂಗನಾಥ್ ಭಾರಧ್ವಾಜ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಮೂರು ದಿನಗಳಲ್ಲಿ ನಡೆಯುವ ಭ್ರಮರ-ಇಂಚರ ನುಡಿಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್ ನುಡಿಹಬ್ಬದ ಸರ್ವಾಧ್ಯಕ್ಷರಾಗಿದ್ದರು.
ಬೆಳಿಗ್ಗೆ ಕಟೀಲು ಪದವೀ ಕಾಲೇಜಿನಿಂದ ಮಕ್ಕಳ ವಿವಿಧ ವೇಷಗಳು, ವಾದ್ಯ ಬ್ಯಾಂಡ್ ಗಳ ಮೂಲಕ ಗಣ್ಯರ ಭವ್ಯ ಮೆರವಣಿಗೆ ನಡೆಯಿತು. ಧ್ವಜಾರೋಹಣವನ್ನು ಎಂಆರ್ ಪಿಎಲ್ ನ ಕೇಶವ ಪಾಟಾಳಿ, ವಸ್ತು ಪ್ರದರ್ಶನವನ್ನು ಮೂಡಬಿದಿರೆ ರಾಜಲಕ್ಷ್ಮಿ ಶಿಕ್ಷಣ ಸಂಸ್ಥೆಯ ರಾಜೇಶ್ ಚೌಟ ಉದ್ಘಾಟಿಸಿದರು. ಕಾಲೇಜುಗಳ ಸಂಚಿಕೆ ಇಂಚರ, ಭ್ರಮರವಾಣಿಯನ್ನು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ  ಬಿಡುಗಡೆಗೊಳಿಸಿದರು.
ಹಿಂದಿನ ಐದು ನುಡಿಹಬ್ಬಗಳ ಅಧ್ಯಕ್ಷರಾದ ಶ್ರೀಧರ ಡಿ.ಎಸ್, ನಾಡೋಜ ಕೆ.ಪಿ.ರಾವ್, ಪಾದೇಕಲ್ಲು ವಿಷ್ಣು ಭಟ್, ಲಕ್ಷ್ಮೀಶ ತೋಳ್ಪಾಡಿ ಹಾಗೂ ವಸಂತ ಭಾರದ್ವಾಜರ ಉಪಸ್ಥಿತಿಯಲ್ಲಿ ಗೋಷ್ಟಿ ನಡೆಯಿತು.
ರಂಗಭೂಮಿ, ಸಿನಿಮಾ ಗೊಷ್ಟಿಯಲ್ಲಿ ಖ್ಯಾತ ನಟರಾದ ಪ್ರೇಮ್, ರಕ್ಷಿತಾ, ಡಾಲಿ ಧನಂಜಯ್, ಪ್ರಕಾಶ್ ತೂಮಿನಾಡು, ನಿರ್ದೇಶಕ ಮಹೇಶ್ ಬಾಬು ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಭಾಗವಹಿಸಿ ರಂಜಿಸಿದರು.
ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಚಂದ್ರಶೇಖರ ಶೆಟ್ಟಿ, ಕಟೀಲು ವಿವಿಧ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಡಾ.ವಿಜಯ್, 
 ಸರೋಜಿನಿ, ಚಂದ್ರಶೇಖರ ಭಟ್, ರಾಜಶೇಖರ್ ಎನ್. ಗಿರೀಶ್ ತಂತ್ರಿ, ಕುಸುಮಾವತಿ ಎನ್. ಹಳೇ ವಿದ್ಯಾರ್ಥಿ ಸಂಘದ
ಲೋಕಯ್ಯ ಕೊಂಡೇಲ, ಕಿರಣ್ ಕುಮಾರ್ ಶೆಟ್ಟಿ
ಮತ್ತಿತರರು ಇದ್ದರು.
ಹರಿನಾರಾಯಣದಾಸ ಆಸ್ರಣ್ಣ ಮೂರು ದಿನದಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿ ನೀಡಿದರು. ಶೈಲಜಾ ಮತ್ತು ಪದ್ಮನಾಭ ಮರಾಠೆ ನಿರೂಪಿಸಿದರು.
ವಿದ್ಯಾರ್ಥಿಗಳು ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವ ನಡೆಯಿತು.
ಶಿಕ್ಷಣ ಸಂಸ್ಥೆಯ ಸುತ್ತಮುತ್ತ
ವಿದ್ಯಾರ್ಥಿಗಳಿಂದ ಜಾನಪದ ವಸ್ತುಗಳು, ಚಿತ್ರಗಳು, ರಂಗೋಲಿ, ಗೂಡುದೀಪಗಳು, ಹೂವುಗಳು, ಪತ್ರಿಕೆ, ಪುಸ್ತಕಗಳ, ಕರಕುಶಲ ವಸ್ತುಗಳ, ಛಾಯಾಚಿತ್ರಗಳ ಪ್ರದರ್ಶನ,  ಸ್ವದೇಶೀ, ಪರಿಸರಪೂರಕ ವಸ್ತುಗಳ ಮಾರಾಟ ನಡೆಯಿತು.
ನುಡಿಹಬ್ಬದಲ್ಲಿ ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನ, ಸಾಂಸ್ಕೃತಿಕ ಕಾಠ್ಯಕ್ರಮಗಳು ಮೂರೂ ದಿನದಲ್ಲಿ ನಡೆಯಲಿದೆ.