ಮೂಲ್ಕಿ ಲಯನ್ಸ್ ಕ್ಲಬ್ನಿಂದ ಶಿಮಂತೂರು ಶಾಲೆಗೆ ಅಕ್ಷಯಪಾತ್ರೆ ಯೋಜನೆಗೆ ಚಾಲನೆ
Thursday, October 9, 2025
ಮೂಲ್ಕಿ:ಸಾಮಾಜಿಕ ಚಿಂತನೆಯುಳ್ಳ ಸಮಾಜ ಸೇವಾ ಸಂಸ್ಥೆಗಳು ಸಮಾಜಕ್ಕೆ ಆಧಾರವಾಗಿರಬೇಕು, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಮುಕ್ತ ನೆರವು ನೀಡುವ ಮೂಲಕ ಸಂಸ್ಥೆಯ ಧ್ಯೇಯ ಉದ್ದೇಶದಂತೆ ಕೆಲಸ ನಿರ್ವಹಿಸಬೇಕು ಎಂದು ಶಿಮಂತೂರು ಸೆಂಟ್ರಲ್ ಸ್ಕೂಲ್ನ ಸಂಚಾಲಕ ದೇವಪ್ರಸಾದ್ ಪುನರೂರು ಹೇಳಿದರು.
ಅವರು ಮೂಲ್ಕಿ ಲಯನ್ಸ್ ಕ್ಲಬ್ನಿಂದ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ಅಕ್ಷಯಪಾತ್ರೆ ಫೌಂಡೇಶನ್ನ ಮೂಲಕ ಮಕ್ಕಳಿಗೆ ಅನ್ನದಾಸೋಹ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಜಿ. ಎಂ. ಹರ್ಷರಾಜ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಮಕ್ಕಳಿಗೆ ಊಟ ಬಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿ ಒಂದು ಲಕ್ಷ ಐವತ್ತು ಸಾವಿರ ಪ್ರಥಮ ಹಂತದ ಮೊತ್ತವಾಗಿ ಅಕ್ಷಯಪಾತ್ರೆ ಪೌಂಡೇಶನ್ಗೆ ಹಸ್ತಾಂತರಿಸಿದರು.
ಕ್ಲಬ್ನ ಕಾರ್ಯದರ್ಶಿ ಶೀತಲ್ ಸುಶೀಲ್, ಕೋಶಾಧಿಕಾರಿ ಸುಶೀಲ್ ಬಂಗೇರ, ಸದಸ್ಯರಾದ ಕಿಶೋರ್ ಶೆಟ್ಟಿ, ಉದಯ ಶೆಟ್ಟಿ, ಪ್ರವೀಣ್ ಶೆಟ್ಟಿ, ನಿರುಪಮಾ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಸುಜಿತ್ ಸಾಲ್ಯಾನ್, ಉದಯ ಅಮೀನ್ ಮಟ್ಟು, ಶಾಲಾ ಮುಖ್ಯ ಶಿಕ್ಷಕ ಜಿತೇಂದ್ರ ವಿ. ರಾವ್ ಇದ್ದರು. ಶಿಕ್ಷಕಿ ನಿಶ್ಮಿತಾ ನಿರೂಪಿಸಿದರು.