ಫೆ.1:ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳೋತ್ಸವ -ಐಕಳೋತ್ಸವ - 2025
Thursday, January 30, 2025
ಕಿನ್ನಿಗೋಳಿ : ಸುಮಾರು 350 ವರ್ಷಕ್ಕಿಂತಲೂ ಹಿಂದಿನಿಂದ ಸಾಂಪ್ರದಾಯಿಕವಾಗಿ ಆರಾಧನಾತ್ಮಕವಾಗಿ ಆಚರಿಸಿಕೊಂಡು ಬರುತ್ತಿರುವ ಜೋಡು ಕರೆಯಾಗಿ 49 ನೇ ವರ್ಷದ ಹೊನಲು ಬೆಳಕಿನ ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳೋತ್ಸವ ಐಕಳೋತ್ಸವ - 2025 ಫೆಬ್ರವರಿ 1 ಮತ್ತು 2ರಂದು ಶಿಸ್ತು ಬದ್ಧವಾಗಿ ನಡೆಯಲಿದೆ ಎಂದು ಐಕಳ ಬಾವ ಕಾಂತಾಬಾರೆ ಬೂದಬಾರೆ ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.ಅವರು ಐಕಳದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಕೋಣಗಳನ್ನು ಬಿಡಿಸುವವರು, ಓಡಿಸುವವರು, ಸ್ಪಷ್ಟವಾದ ನಿಯಮಗಳನ್ನು ಪಾಲಿಸಬೇಕು ದಂಡನೆಗೆ ಅವಕಾಶವಿಲ್ಲ ಸಮಯಕ್ಕೆ ಬಾರದ ಕೋಣಗಳ ಯಜಮಾನರ ವಿರುದ್ಧ ನಿರ್ದಾಕ್ಷಿಣವಾಗಿ ಕ್ರಮ ಕೈಗೊಳ್ಳಲಾಗುವುದು ಸರ್ಕಾರದ ಸೂಚನೆ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಆಧ್ಯಾತ್ಮಿಕಗುರು ಚಂದ್ರಶೇಖರ ಸ್ವಾಮೀಜಿ ಬೆಂಗಳೂರು ಇವರು ಕಂಬಳವನ್ನು ಉದ್ಘಾಟಿಸಲಿದ್ದಾರೆ, ಮಹಾರಾಷ್ಟ್ರದ ಸರ್ಕಾರದ ಸಚಿವ ಪ್ರತಾಪ್ ಜಿ ಬಾಬುರಾವ್ ಸರ್ ನಾಯಕ್ ಇವರು ವಿಶೇಷವಾಗಿ ಆಗಮಿಸಲಿದ್ದಾರೆ. ತಾರಾ ಮೆರುಗಿನಲ್ಲಿ ಕ್ರಿಕೆಟಿಗ ರವಿ ಶಾಸ್ತ್ರಿ, ಸಂಗೀತ ನಿರ್ದೇಶಕ ಗುರುಕಿರಣ್ ಸಹಿತ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. 15 ಮಂದಿಗೆ ವಿಶೇಷ ಸಾಧಕರ ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 49ನೇ ವರ್ಷದ ಈ ಕಂಬಳ ಮುಂದಿನ ವರ್ಷ 50ನೇ ಸುವರ್ಣ ಮಹೋತ್ಸವ ಆಚರಿಸಲಿರುವುದರಿಂದ 50 ವಿವಿಧ ಕಾರ್ಯಕ್ರಮದ ಸಹಿತ 55 ಲಕ್ಷ ವೆಚ್ಚದ ವೇದಿಕೆ ನಿರ್ಮಾಣ ಆಗಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿದರು.
ವಿಜಯಕುಮಾರ್ ಕಂಗಿನಮನೆ ಮುರಳಿಧರ ಶೆಟ್ಟಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸಾಯಿನಾಥ ಶೆಟ್ಟಿ, ಸ್ವರಾಜ್ ಶೆಟ್ಟಿ, ಲೀಲಾಧರ ಶೆಟ್ಟಿ, ಚಿತ್ತರಂಜನ್ ಭಂಡಾರಿ, ತಾರಾನಾಥ ಶೆಟ್ಟಿ, ಸಂಜೀವ ಶೆಟ್ಟಿ, ಹರೀಶ್ ಶೆಟ್ಟಿ, ಯೋಗೀಶ್ ರಾವ್ ನವೀನ್ ಚಂದ್ರ ಆಳ್ವ, ದಿವಾಕರ ಚೌಟ, ಇಲ್ಯಾಸ್ ಫ್ರ್ಯಾಂಕ್ಲಿನ್ ಮತ್ತಿತರರು ಇದ್ದರು.