ಡಿ.22:ಮೂಲ್ಕಿ ಸೀಮೆಯ ಅರಸು ಕಂಬಳ
Thursday, December 19, 2024
ಹಳೆಯಂಗಡಿ:ಮೂಲ್ಕಿ ಸೀಮೆ ಅರಸರ ನೇತೃತ್ವದಲ್ಲಿ 400 ವರ್ಷಗಳಿಂದ ನಡೆದುಬರುತ್ತಿರುವ ಅರಸು ಕಂಬಳವು ಮುಲ್ಕಿ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಡಿ.22 ರಂದು ಬೆಳಿಗ್ಗೆ 9 ಗಂಟೆಗೆ ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ ದುಗ್ಗಣ್ಣ ಸಾವಂತರು ಹೇಳಿದರು.ಅವರಿಂದು ಮೂಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಮೂಲ್ಕಿ ಅರಮನೆಯ ಗೌತಮ್ ಜೈನ್ ಮಾತನಾಡಿ ಅರಸು ಕಂಬಳದ ಉದ್ಘಾಟನೆಯನ್ನು ವಿಶ್ರಾಂತ ನ್ಯಾಯಾಧೀಶ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆಯವರು ನೆರವೇರಿಸಲಿದ್ದಾರೆ. ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕೇಸರ ಎನ್. ಎಸ್. ಮನೋಹರ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು,ಖ್ಯಾತ ವಿದ್ವಾಂಸ ಪಂಜ ಶ್ರೀ ಭಾಸ್ಕರ ಭಟ್ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.ಅಂದು ಸಂಜೆ 5ಕ್ಕೆ ಸಭಾ ಕಾರ್ಯಕ್ರಮವು ನಡೆಯಲಿದ್ದು , ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ದ,ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಇದರ ಸಹಕಾರ ರತ್ನ ಡಾ. ಎಂ. ಎನ್ ರಾಜೇಂದ್ರಕುಮಾರ್,ಹೇರಂಭ ಇಂಡಸ್ಟ್ರೀಸ್ ಮುಂಬೈ ನ ಸಿ ಎಂ ಡಿ ಕನ್ಯಾನ ಸದಾಶಿವ ಶೆಟ್ಟಿ ಇವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಮಂಗಳೂರು ಸಂಸದ ಕ್ಯಾ.ಬೃಜೇಶ್ ಚೌಟ, ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್,ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕಮದಲ್ಲಿ ತಾರಾ ಆಕರ್ಷಣೆಯಾಗಿ ಖ್ಯಾತ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ, ಪರಿಸರ ಕಾರ್ಯಕರ್ತ ಸ್ನೇಕ್ ಶ್ಯಾಮ್ ಮೈಸೂರು, ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಮತ್ತು ಪ್ರಥಮ್ ಭಾಗವಹಿಸಲಿದ್ದಾರೆ. ಡಿ. ರಂದು ಬೆಳಿಗ್ಗೆ 10 ಗಂಟೆಗೆ ಕಂಬಳದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಹೋಟೆಲ್ ವುಡ್ ಸೈಡ್ ಮಂಗಳೂರು ನಿರ್ದೇಶಕ ಎಚ್ ಭಾಸ್ಕರ್ ಸಾಲ್ಯಾನ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಮೂಲ್ಕಿ ಸೀಮೆಯ ಎಲ್ಲಾ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರುಗಳು ಹಾಗೂ ಗಣ್ಯರು ಉಪಸ್ಥಿತಲಿರುವರು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ ಸಾವಂತರು,ಮೂಲ್ಕಿ ಅರಮನೆಯ ಗೌತಮ್ ಜೈನ್ ,ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಮುಲ್ಕಿ ಸೀಮೆಯ ಅರಸು ಕಂಬಳದ ಅಧ್ಯಕ್ಷ ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.ಮೂಲ್ಕಿ
ಸೀಮೆಯ ಅರಸು ಕಂಬಳ ಸಮಿತಿಯ ಉಪಾಧ್ಯಕ್ಷ ವಿನೋದ್ ಸಾಲ್ಯಾನ್ ಧನ್ಯವಾದವಿತ್ತರು.