ಕಟೀಲಿನಲ್ಲಿ ವಿಜ್ಞಾನವನ ಶಕ್ತಿ 2.0 ಉದ್ಘಾಟನೆ
ಕಟೀಲು : ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಪರಿಸರ ಉಳಿಸಲು ಇವತ್ತಿನ ಶಿಕ್ಷಣ ಪ್ರೇರಣೆ ನೀಡಬೇಕು ಎಂದು ಕೇಮಾರು ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪದವೀಪೂರ್ವ ಕಾಲೇಜಿನಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್ ವತಿಯಿಂದ ನಿರ್ಮಿತ 51 ಬಗೆಯ ವಿಜ್ಞಾನ ಮಾದರಿಗಳನ್ನೊಳಗೊಂಡ ಕಟೀಲಿನಲ್ಲಿ ವಿಜ್ಞಾನವನ ಶಕ್ತಿ 2.0 ಉದ್ಘಾಟಿಸಿ ಮಾತನಾಡಿದರು.
ಹೆತ್ತ ತಂದೆತಾಯಿಯರನ್ನು ಅನಾಥಾಶ್ರಮಕ್ಕೆ ಸೇರಿಸುವ ಶಿಕ್ಷಣ ನಮಗೆ ಬೇಡ. ವಿಜ್ಞಾನ ಶಿಕ್ಷಣ ಮಕ್ಕಳನ್ನು ಸುಜ್ಞಾನಿಗಳನ್ನಾಗಿಸಲಿ. ಎಂದು ಅವರು ಹೇಳಿದರು.
ಕಟೀಲು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಿವೃತ್ತ ಪ್ರಾಚಾರ್ಯರಾದ ಡಾ. ಕೃಷ್ಣ ಕಾಂಚನ್ ಹಾಗೂ ನಿವೃತ್ತ ಉಪನ್ಯಾಸಕ ನಾಗೇಶ್ ರಾವ್ ಅವರನ್ನು ಗೌರವಿಸಲಾಯಿತು. ಕಟೀಲು ಕನ್ನಡ ಶಾಲೆಯ ಎಂಟನೇ ತರಗತಿಗೆ ಸೇರುವ ಮಕ್ಕಳ ಶಿಕ್ಷಣ ಶುಲ್ಕ ಹಾಗೂ ಇಪ್ಪತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಮುಂಡ್ಕೂರು ದೇಗುಲದ ಅರ್ಚಕ ರಾಮದಾಸ ಭಟ್, ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಕರ್ನಾಟಕ ಲ್ಯಾಬೊರೇಟರಿ ಇಕ್ವಿಪ್ಮೆಂಟ್ ಸಪ್ಲಾಯಿಸ್ನ ಧರಣೇಶ್ ಆಚಾರ್ಯ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ. ಕುಸುಮಾವತಿ, ಚಂದ್ರಶೇಖರ ಭಟ್, ಗಿರೀಶ್ ತಂತ್ರಿ, ಸರೋಜಿನಿ, ರಾಜಶೇಖರ್ ಮತ್ತಿತರರಿದ್ದರು.
ಶ್ರೀವತ್ಸ ಭಟ್ ಸ್ವಾಗತಿಸಿದರು. ರಾಜಶೇಖರ್ ನಿರೂಪಿಸಿದರು.

