ಹಿಂದೂ ಮುಸ್ಲಿಂ ಕ್ರೈಸ್ತ ಬಾಂಧವರ ಒಗ್ಗೂಡುವಿಕೆಯಲ್ಲಿ 16ನೇ ವರ್ಷದ ಸಾರ್ವಜನಿಕ ಈದ್ ಮಿಲಾದ್ ಕಾರ್ಯಕ್ರಮ
Monday, September 23, 2024
ಕಿನ್ನಿಗೋಳಿ: ಸಾಮರಸ್ಯದೊಂದಿಗೆ ಸಾರ್ವತ್ರಿಕ ಹಬ್ಬದ ಸಂಭ್ರಮಕ್ಕೆ ಧರ್ಮದ ಕಟ್ಟು ಪಾಡುಗಳು ಇರಬಾರದು ಎಂದು ಮೂಲ್ಕಿ ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿಯ ಆಶ್ರಯದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಬಾಂಧವರ ಒಗ್ಗೂಡುವಿಕೆಯಲ್ಲಿ ನಡೆದ 16ನೇ ವರ್ಷದ ಸಾರ್ವಜನಿಕ ಈದ್ ಮಿಲಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಕಿನ್ನಿಗೋಳಿಯ ಕೊಸೆಸಾವ್ ಅಮ್ಮನವರ ಚರ್ಚ್ ನ ಸಹಾಯಕ ಧರ್ಮಗುರು ಸ್ಟೀವನ್ ಜೋಯೆಲ್ ಕುಟಿನ್ಹೋ ಮಾತನಾಡಿ, ಸಾಮರಸ್ಯ ಬದುಕಿನಿಂದ ಜೀವನ ಪಾವನ ಆಗಬೇಕು, ನಾವು ಉಸಿರಾಡುವ ಗಾಳಿ ನೀರು ಒಂದೇ ಆಗಿದ್ದು, ಇದಕ್ಕೆ ಧರ್ಮ ಧರ್ಮದ ಸಂಘರ್ಷ ಇರಬಾರದು ಎಂದು ಹೇಳಿದರು.
ಡಿವೈಎಫ್ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಮಹಮ್ಮದ್ ಪೈಗಂಬರ್ ಅವರು ಅಂದಿನ ಕಾಲದಲ್ಲಿ ಮುಸ್ಲಿಮರಲ್ಲಿ ಸಮಾನತೆ ಹಾಗೂ ಮಹಿಳೆಯರ ಹಕ್ಕಿಗಾಗಿ ದೊಡ್ಡ ಕೊಡುಗೆ ನೀಡಿದ ಸಂತ ಅವರನ್ನು ಇಂದಿನ ಕಾಲಘಟ್ಟದಲ್ಲಿಯೂ ಸ್ಮರಿಸುವುದು ಕರ್ತವ್ಯವಾಗಿದೆ. ಭಾರತ ದೇಶ ವೈವಿಧ್ಯತೆಯಿಂದ ಬಾಳಿದರೆ ಮಾತ್ರ ಅದಕ್ಕೊಂದು ಉತ್ತಮ ಸ್ಥಾನಮಾನ ಸಿಗುವುದು ಇದರಿಂದಲೇ ಅದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕಿನ್ನಿಗೋಳಿಯಂತಹ ಪ್ರದೇಶದಲ್ಲಿ ಸಾರ್ವಜನಿಕವಾಗಿ ಯಕ್ಷಗಾನ, ಕ್ರಿಸ್ಮಸ್, ಈದ್ಮಿಲಾದ್ ಆಚರಿಸುತ್ತಿರುವುದು ಜಿಲ್ಲೆಗೆ ವ್ಯಾಪಿಸಲಿ ಎಂದರು.
ಪತ್ರಕರ್ತ ಮೂಲ್ಕಿ ತಾಲ್ಲೂಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಮಿಥುನ್ ಕೊಡೆತ್ತೂರು ಅವರನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ಶೇಖರ ಪೂಜಾರಿ, ಕಾರ್ಯದರ್ಶಿ ವಸಂತ್ ಶೆಟ್ಟಿಗಾರ್, ಕೆ.ಎ.ಖಾದರ್, ಹೆರಿಕ್ ಪಾಯಸ್, ಶಶಿ ಸುರೇಶ್ ಮತ್ತಿತರರು ಇದ್ದರು.
ನಂತರ ಸಾಮೂಹಿಕ ಭೋಜನ ನಡೆಯಿತು.