ಭಾರೀ ಮಳೆ , ಬಿರುಗಾಳಿಗೆ ಹಲವೆಡೆ ಹಾನಿ
ಬಜಪೆ:ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಿoಡೆಲ್ ಮತ್ತು ಪದ್ರೆoಗಿ ಎಂಬಲ್ಲಿ ಎರಡು ಮನೆಗಳ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಒಂದು ಮಗುವಿಗೆ ಹಾಗೂ ಮತ್ತೊರ್ವ ವ್ಯಕ್ತಿಗೆ ಗಾಯವಾಗಿದೆ. ಪದ್ರೆoಗಿ ಎಂಬಲ್ಲಿಯ ರತ್ನಾಕರ್ ಎಂಬವರ ಮನೆಯ ಪಕ್ಕದ ಮರ ಉರುಳಿ ಬಿದ್ದಿದ್ದು, ಒಳಗಡೆ ಕೋಣೆಯಲ್ಲಿ ಮಲಗಿದ್ದ 6 ವರ್ಷದ ಆಯುಷ್ ಎಂಬ ಮಗುವಿಗೆ ಗಂಭೀರ ಗಾಯವಾಗಿದ್ದು, ಮಗುವಿನ ಹಲ್ಲುಗಳು ಜಖಂಗೊಂಡು ಆಸ್ಪತ್ರೆಗೆ ದಾಖಲಾಗಿದೆ. ರತ್ನಾಕರ್ ಅವರ ಸಹೋದರ, ಆತನ ಪತ್ನಿಗೂ ಗಾಯವಾಗಿದೆ. ರತ್ನಾಕರ್ ಅವರ ಮನೆ ಭಾಗಷ ಹಾನಿಯಾಗಿದೆ. ಬ್ರಿoಡೇಲ್ ಎಂಬಲ್ಲಿ ಶೋಭಾ ಎಂಬವರ ಮನೆಯ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದ್ದು, ಅದ್ರಷ್ಟಾವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮರ ಬೀಳುವ ವೇಳೆ ಮನೆಯೊಳಗಿದ್ದವರು ಮನೆಯಿಂದ ಹೊರಗೆ ಓಡಿ ಬಂದ ಕಾರಣ ಭಾರೀ ಅನಾಹುತ ತಪ್ಪಿದೆ. ಗುರುಪುರ ಹೋಬಳಿ ಉಪ ತಹಸೀಲ್ದಾರ್ ಶಿವಪ್ರಸಾದ್, ಎಡಪದವು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ, ಸದಸ್ಯರು ಮತ್ತು ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿದ್ದು, ಹಾನಿಯಾದ ಮನೆಗಳಿಗೆ ಸರಕಾರದಿಂದ ಪರಿಹಾರ ಒದಗಿಸಿಕೊಡಲಾಗುವುದು ಎಂದು ಉಪತಹಸೀಲ್ದಾರ್ ಶಿವಪ್ರಸಾದ್ ಮಧ್ಯಮಕ್ಕೆ ತಿಳಿಸಿದ್ದಾರೆ.
ಇಲ್ಲಿನ ಬೋರುಗುಡ್ಡೆ ಬೀಡಿ ಕಾಲನಿಯಲ್ಲಿ ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಹಾನಿಯಾಗಿದೆ. ಅಲ್ಲದೇ ಸುಳಿಗಾಳಿ ಇಲ್ಲಿನ ತೋಟಗಳಲ್ಲಿ ಅಡಿಕೆ ಮರಗಳನ್ನು ಸೀಳಿ ಹಾಕಿದೆ. ಕೊರ್ಡೇಲ್ ಎಂಬಲ್ಲಿ ಹೇಮಾವತಿ ನಾಯ್ಕ್ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದರೆ, ಇಲ್ಲಿ ಬ್ರಹತ್ ಮರ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸ್ಥಳೀಯ ಯುವಕರು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಮರ ತೆರವುಗೊಳಿಸಿದರು. ಅಲ್ಲದೇ ಹಲವು ಮನೆಗಳ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಎಡಪದವು ಮೆಸ್ಕಾಂ ವ್ಯಾಪ್ತಿಯ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿತ್ತು.ಕುದುರೆ ಬೆಟ್ಟು ಎಂಬಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಹಾನಿಯಾಗಿದೆ. ಕುಪ್ಪೆಪದವು ಬಾರ್ದಿಲ ಸಾಂಬಸದಾಶಿವ ದೇವಸ್ಥಾನದ ಬಳಿ ಮರವೊಂದು ಉರುಳಿ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿವೆ ಇದರಿಂದಾಗಿ ಕುಪ್ಪೆಪದವು-ಕಾಪಿಕಾಡು-ಬಾರ್ದಿಲ-ಇರುವೈಲು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪೂವಣಿಬೆಟ್ಟು ಮತ್ತು ಕೊರಿಬೆಟ್ಟು ಎಂಬಲ್ಲಿ ತಲಾ ಒಂದು ಕಂಬ ತುಂಡಾಗಿ ಬಿದ್ದಿದೆ.