ಎಂ.ಆರ್.ಪಿ.ಎಲ್, ವೆನ್ಲಾಕ್ ಅಸ್ಪತ್ರೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ರಕ್ತದಾನ ಶಿಬಿರ
Monday, July 15, 2024
ಸುರತ್ಕಲ್: ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಯೋಗದಲ್ಲಿ ಸೆಕ್ರೆಟ್ ಹಾರ್ಟ್ ಚರ್ಚ್ ಸುರತ್ಕಲ್ , ವೆನ್ಲಾಕ್ ಅಸ್ಪತ್ರೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಅಶ್ರಯದಲ್ಲಿ ಸುರತ್ಕಲ್ ನ ಚರ್ಚ್ ಹಾಲ್ ನಲ್ಲಿ ರಕ್ತದಾನ ಶಿಬಿರ ನಡೆಯಿತು. ಸೆಕ್ರೆಟ್ ಹಾರ್ಟ್ ಚರ್ಚ್ ನ ಧರ್ಮಗುರು ಅಸ್ಟೀನ್ ಪೀಟರ್ ಪೇರಿಸ್ ಅವರು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ರಕ್ತದಾನವೆಂಬುದು ಮಹಾದಾನ ಆರೋಗ್ಯವಂತ ವ್ಯಕ್ತಿ ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಬಹುದಾಗಿದೆ. ಎಂ.ಆರ್.ಪಿ.ಎಲ್ ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ರಕ್ತದಾನದಂತಹ ಕಾರ್ಯಕ್ರಮ ಅಳವಡಿಸಿರುವುದು ಅಭಿನಂದನೀಯ ಎಂದರು. ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್.ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಮಾತನಾಡಿ ರಕ್ತದಾನವೆಂಬುದು ಒಂದು ರೋಗಿಯ ಜೀವ ಉಳಿಸುವ ಕೆಲಸವಾಗಿದೆ .ಪ್ರತೀ ವರ್ಷ ಎಂ.ಆರ್.ಪಿ.ಎಲ್.ಸಂಸ್ಥೆ ತನ್ನ ಸಾಮಾಜಿಕ ಚಟುವಟಿಕೆಯೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಕಳೆದ ಜುಲೈ ಒಂದರಿಂದ ನಿರಂತರವಾಗಿ ಜಿಲ್ಲೆಯ ಹಲವು ಕಡೆ ಗಳಲ್ಲಿ ವಿವಿಧ ಸೇವಾ ಸವಲತ್ತುಗಳನ್ನು ನೀಡಲಾಗಿದೆ ಎಂದರು. ಈ ಸಂದರ್ಭ ನೂರಾರು ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ವೆನ್ ಲಾಕ್ ಆಸ್ಪತ್ರೆಯ ಅಶೋಕ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಸೆಲ್ ರಾಚ್, ರಾಬರ್ಟ್ ಮಿಸ್ಕತ್ ಮತ್ತಿತರರು ಉಪಸ್ಥಿತರಿದ್ದರು. ಎಂ.ಆರ್.ಪಿ.ಎಲ್.ಅಧಿಕಾರಿ ಸ್ಟೀವನ್ ಪಿಂಟೋ ಸ್ವಾಗತಿಸಿ, ಅಲ್ವೀನ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಡೈನಾ ಡಿಸೋಜ ನಿರೂಪಿಸಿದರು.