Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡುವುದನ್ನು ಬಿಟ್ಟು ಬಿಡಿ



ಹಳೆಯಂಗಡಿ: "ದಲಿತರ ಬಗ್ಗೆ ಅತ್ಯಂತ ನೀಚ ಸುದ್ದಿಯನ್ನು ಹರಡುತ್ತಿರುವ ಬಿಜೆಪಿಯವರಿಗೆ ದಲಿತರ ಬಗ್ಗೆ ಮಾತಾಡುವ ನೈತಿಕತೆ ಹಾಗೂ ಹಕ್ಕು ಇಲ್ಲ. ಬಿಜೆಪಿಯವರು ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಣೆ ಮಾಡಿ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ" ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
"ಬಿಜೆಪಿ ಪಕ್ಷ ನೀಡಿರುವ ಪತ್ರಿಕಾ ಜಾಹೀರಾತಿನಲ್ಲಿ ಕಾಂಗ್ರೆಸ್ ಬಾಂಬ್ ಹಾಕುತ್ತದೆ, ಜನರಿಗೆ ಭಯ ಹುಟ್ಟಿಸುತ್ತದೆ, ಗಲಭೆಕೋರರನ್ನು ಬೆಂಬಲಿಸುತ್ತದೆ ಎಂದು ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತಾಡುತ್ತಿದ್ದರೆ ಜನರು ಬಿಜೆಪಿ ಪಕ್ಷವನ್ನು ನಂಬುತ್ತಿದ್ದರು. ಆದರೆ ಸುಳ್ಳನ್ನೇ ಹೇಳಿಕೊಂಡು ಬರುತ್ತಿರುವ ಬಿಜೆಪಿ ನಾಯಕರು ಈ ಜಾಹೀರಾತು ಬಳಸಿಕೊಂಡು ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ" ಎಂದರು. 
"ಮೋದಿ ಆಡಳಿತದಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಅಸಂಖ್ಯ ಸೈನಿಕರು ಹುತಾತ್ಮರಾಗಿದ್ದಾರೆ. ಸೈನಿಕರ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಿರುವಾಗ ಬಿಜೆಪಿಗರು ಬಾಂಬ್, ಉಗ್ರರ ಹೆಸರಲ್ಲಿ ಮತದಾರರನ್ನು ವಂಚಿಸಲು ಹೊರಟಿರುವುದು ನಾಚಿಕೆಗೇಡು. ಚುನಾವಣೆ ಹತ್ತಿರ ಬರುವಾಗ ಪಾಕಿಸ್ತಾನ ಪಾಕಿಸ್ತಾನ ಎಂದು ಕೂಗುವ ಬಿಜೆಪಿ ನಾಯಕರು ಅಮಾಯಕ ಜನರನ್ನು ವಂಚಿಸಲು ಸಾಧ್ಯವಿಲ್ಲ" ಎಂದು ಹೇಳಿದರು.


"ಹುಬ್ಬಳ್ಳಿಯ ನೇಹಾ ಕೊಲೆಯನ್ನು ಲವ್ ಜಿಹಾದ್ ಎಂದು ಕೂಗಾಡುವ ಬಿಜೆಪಿಗರು ತಮ್ಮ ಸರಕಾರದ ಅವಧಿಯಲ್ಲಿ ಈ ಹಿಂದೆ ನಡೆದಿರುವ ಸಾಲು ಸಾಲು ಹೆಣ್ಮಕ್ಕಳ ಹತ್ಯೆ, ಅತ್ಯಾಚಾರವನ್ನು ಖಂಡಿಸಿ ಮಾತಾಡುತ್ತಿಲ್ಲ ಯಾಕೆ?" ಎಂದು ಕಿಡಿಕಾರಿದರು.


ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂಯೋಜಕ ವಸಂತ ಬೆರ್ನಾರ್ಡ್, ಮೂಲ್ಕಿ ಮೂಡಬಿದ್ರೆ ಚುನಾವಣಾ ವೀಕ್ಷಕ ಗುರುರಾಜ್ ಪೂಜಾರಿ, ಅಶೋಕ್ ಪೂಜಾರಿ, ಮೂಲ್ಕಿ ಬ್ಲಾಕ್ ಪ್ರಧಾನ, ಕಾರ್ಯದರ್ಶಿ ಮಂಜುನಾಥ್ ಕಂಬಾರ್, ಖಾದರ್ ಮತ್ತಿತರರು ಉಪಸ್ಥಿತರಿದ್ದರು.