ತೋಕೂರು:ಅಷ್ಟ ಬಂಧ ಬ್ರಹ್ಮ ಕುಂಭಾಭಿಷೇಕದ ಪ್ರಯುಕ್ತ ಧಾರ್ಮಿಕ ಸಭೆ
Monday, May 15, 2023
ಧರ್ಮದ ಪುನಶ್ಚೇತನ ವಾಗ ಬೇಕಾದರೆ ಒಗ್ಗಟ್ಟು ಅಗತ್ಯ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಾಶೇಖರಾನಂದ ಸ್ವಾಮೀಜಿ ಅವರು ಹೇಳಿದರು.
ಅವರು ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಅಷ್ಟ ಬಂಧ ಬ್ರಹ್ಮ ಕುಂಭಾಭಿಷೇಕದ ಪ್ರಯುಕ್ತ ಸ್ಕಂದ ಮಂಟಪದಲ್ಲಿ ಆದಿತ್ಯವಾರದಂದು ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರು ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತುಳು ಸಾಹಿತ್ಯ ಆಕಾಡೆಮಿಯ ಮಾಜಿ ಸದಸ್ಯ ಹಾಗೂ ಸಂಸ್ಕಾರ ಭಾರತಿ ಲೋಕಕಲಾ ಮಂಗಳೂರು ವಿಭಾಗದ ಪ್ರಮುಖ್ ದಯಾನಂದ ಜಿ ಕತ್ತಲ್ ಸಾರ್ ಅವರು ತುಳುನಾಡಿನ ಧರ್ಮ ಮತ್ತು ಆಚರಣೆ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ನಾವು ಸತ್ಯ ಮಾರ್ಗದಲ್ಲಿ ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.ಅಧುನಿಕರಣದ ಭರಾಟೆಯಲ್ಲಿ ಪ್ರಕೃತಿಯನ್ನು ನಾಶಮಾಡಿ ಧಾರ್ಮಿಕ ಕ್ಷೇತ್ರವನ್ನು ಹಾಳುಮಾಡುತ್ತಿದ್ದೇವೆ ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕುಂಭಾಶಿ ಆನೆ ಗುಡ್ಡೆ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಅನುವಂಶಿಕ ಅರ್ಚಕ ಕೆ ಸುಬ್ರಮಣ್ಯ ಉಪಾಧ್ಯಾಯ, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ ನಾರಾಯಣ್, ಥಾಣೆ ಬಂಟ್ಸ್ ಏಸೋಶಿಯೇಷನ್ ಮಾಜೀ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಸಸಿಹಿತ್ತು ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊತ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್,ಸಮಿತಿಯ ಕಾರ್ಯದರ್ಶಿ ರಾಮಣ್ಣ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಂಬೈ ದೇವಾಡಿಗ ಸಂಘದ ಮಾಜೀ ಅಧ್ಯಕ್ಷ ಕೃಷ್ಣಪ್ಪ ನಾರಾಯಣ ದೇವಾಡಿಗ ರನ್ನು ದಾನಿಗಳ ನೆಲೆಯಲ್ಲಿ ಗೌರವಿಸಲಾಯಿತು. ಗೀತಾ ಸದಾನಂದ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.