ಪಕ್ಷದಲ್ಲಿನ ಸಂಘಟನಾತ್ಮಕ ಕೊರತೆ ಯೇ ಕಾಂಗ್ರೆಸ್ನ ಸೋಲಿಗೆ ಕಾರಣ - ಅಭಯಚಂದ್ರ ಜೈನ್
Friday, May 19, 2023
ಹಳೆಯಂಗಡಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಪಕ್ಷದಲ್ಲಿನ ಸಂಘಟನಾತ್ಮಕ ಕೊರತೆ ಹಾಗೂ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮಾಜಿ ಸಚಿವ ಕೆ .ಅಭಯ ಚಂದ್ರ ಜೈನ್ ಅವರು ಹೇಳಿದ್ದಾರೆ .
ಅವರು ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಾಜ್ಯದಲ್ಲಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದಿಂದ ಉತ್ತಮ ಕೆಲಸಗಳಾಗಿದ್ದರೂ ಸಂಘಟನೆಯಲ್ಲಿ ಹಿಂದೆ ಬಿದ್ದೆವು, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದ್ದು ಸಿದ್ದರಾಮಯ್ಯ ನೇತೃತ್ವದಲ್ಲಿ ಜನರಿಗೆಉತ್ತಮ ಆಡಳಿತ ನೀಡುವ ವಿಶ್ವಾಸವಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳು ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷದಿಂದ ದೂರವಾಗಿ ಸಮಾನತೆ ಹಾಗೂ ಅಭಿವೃದ್ಧಿಯಾಗಲು ಸೂಕ್ತ ಗ್ರಹ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಯಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ರವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ನಾನು ಯಾವುದೇ ಕಾರಣಕ್ಕೂ ಸರಕಾರದಲ್ಲಿ ಮಂತ್ರಿ ಆಗುವುದಿಲ್ಲ ಸರಕಾರ ಕೊಟ್ಟರೂ ಹಿಂಭಾಗಿಲಿನ ಅವಕಾಶ ಬಯಸುವುದಿಲ್ಲ, ಏನಿದ್ದರೂ ಮಿಥುನ್ ರೈ ನಮ್ಮ ಮುಂದಿನ ನಾಯಕ ಎಂದರು.
ಜಿಲ್ಲೆಯಲ್ಲಿ ಸೋಲಿಗೆ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡಬೇಕಾಗಿಲ್ಲ ಮುಲ್ಕಿ ಮೂಡಬಿದ್ರೆಯಲ್ಲಿ ಪಕ್ಷ ಸೋಲಲು ಕಾರಣಕರ್ತರಾದವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ
ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.
ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ಸಹಿತ ಅವಕಾಶವಿಲ್ಲ ಎಂದು ಹೇಳಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನ ಮಾನಸದಲ್ಲಿ ಉಳಿಯುವ ಅಭಿವೃದ್ಧಿ ಮಾಡಿ ಸಾಧಿಸಿ ತೋರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕೊಆರ್ಡಿನೇಟರ್ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಶಮೀರ್ ಎ. ಎಹ್, ಅಬ್ದುಲ್ ಅಜೀಜ್ ಮತ್ತಿತರರು ಉಪಸ್ಥಿತರಿದ್ದರು.