ಎಸ್.ಕೋಡಿ ಬಿಲ್ಲವ ಸಂಘದ ಚಿಣ್ಣರ ಹಬ್ಬದ ಸಮಾರೋಪ
Monday, April 14, 2025
ಮೂಲ್ಕಿ : ಮಕ್ಕಳಿಗೆ ಮೌಲ್ಯಯುತವಾದ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡಿದ ಶಿಬಿರದ ಸಾಧನೆ ಶ್ಲಾಘನೀಯ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಅವರು ಎಸ್. ಕೋಡಿಯ ಪದ್ಮಾವತಿ ಲಾನ್ ನಲ್ಲಿ ನಡೆದ ಎಸ್. ಕೋಡಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಹಾಗೂ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಜಂಟಿ ಸಂಯೋಜನೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಚಿಣ್ಣರ ಹಬ್ಬ 2025 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಎಸ್. ಕೋಡಿ ಇದರ ಅಧ್ಯಕ್ಷ ನವೀನ್ ಹರಿಪಾದೆಯವರು ವಹಿಸಿದ್ದರು,
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜರವರು ಮಾತನಾಡಿ ಕೂಡು ಕುಟುಂಬದ ಬಾಂಧವ್ಯ ಮತ್ತು ಹಳ್ಳಿ ಸೊಗಡಿನ ಬೇಸಿಗೆ ರಜೆಯ ಖುಷಿಯನ್ನು ಮತ್ತೆ ಮಕ್ಕಳಿಗೆ ಒದಗಿಸಿಕೊಡಲು ಪ್ರಯತ್ನಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಂತ ಅಶೋಕ್ ಕರ್ಕೇರ, ಯುವ ವೇದಿಕೆಯ ಅಧ್ಯಕ್ಷ ಪವನ್ ಕುಮಾರ್ ರವರು ಉಪಸ್ಥಿತರಿದ್ದರು.
ಮಕ್ಕಳ ಮನರಂಜನಾ ಕಾರ್ಯಕ್ರಮದಲ್ಲಿಎಂಟು ದಿನಗಳ ಕಾಲ ಶಿಬಿರದಲ್ಲಿ ಕಲಿತ ವಿಷಯಗಳಾದ ನೃತ್ಯ,ಯೋಗ ಸಂಗೀತ ಮತ್ತು ಕಾರ್ಯಕ್ರಮ ನಿರೂಪಣೆ ಇತ್ಯಾದಿಗಳನ್ನು ಶಿಬಿರಾರ್ಥಿಗಳು ವೇದಿಕೆಯಲ್ಲಿ ಪ್ರದರ್ಶನ ಗೊಳಿಸಿದರು.
ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಶಿಬಿರದ ಪ್ರಯೋಜನದ ಬಗ್ಗೆ ಶಿಬಿರಾರ್ಥಿಗಳಾದ ಹವೀಶ್ ಆರ್. ಕುಡ್ಲ ಮತ್ತು ಅಪೂರ್ವ, ಮಕ್ಕಳ ಪೋಷಕರಾದ ಉಷಾ ನರೇಂದ್ರ ಕೆರೆಕಾಡು ಮತ್ತು ಗಾಯತ್ರಿ ರಾಜೇಶ್ ಕುಡ್ಲ ಇವರು ಶಿಬಿರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಅಪೂರ್ವರವರು ಪ್ರಾರ್ಥಿಸಿ, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳಾದ ಬಬಿತಾ ಜೆ. ಸುವರ್ಣರವರು, ಸ್ವಾಗತಿಸಿ, ಸುನೀತಾ ಗುರುರಾಜ್ ರವರು ಎಂಟು ದಿನಗಳ ಶಿಬಿರದ ಸಿಂಹಾವಲೋಕನವನ್ನು ನೆರವೇರಿಸಿಕೊಟ್ಟರು, ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ವಂದನಾರ್ಪಣೆಗೈದರು
ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ಕಾರ್ಯಕ್ರಮವನ್ನು ನಿರೂಪಿಸಿದರು.