ಕಳವು ಪ್ರಕರಣ,ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
Friday, May 19, 2023
100 ಗ್ರಾಂ ತೂಕದ 2,00,000/- ಲಕ್ಷ ರೂ ಬೆಲೆಯ ಚಿನ್ನಾಭರಣಗಳು ಕಳವು ಮಾಡಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುನಿಯಮ್ಮ, ಸರಸ್ವತಿ, ಲಕ್ಷ್ಮೀ, ಗುಲಾಬಿ ಮತ್ತು ಮಂಜ ಎಂಬವರನ್ನು ಮತ್ತು ಸೊತ್ತುಗಳ ಸಹಿತ 2014 ರ ಜ.10 ರಂದು ಬಜಪೆ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಪ್ರಕರಣದಲ್ಲಿ ಘನ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು 2014 ರಿಂದ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಉಡುಪಿ ಜಿಲ್ಲೆಯ ಕಾಪು ಎಂಬಲ್ಲಿಂದ ಆರೋಪಿಯನ್ನು ಪೊಲೀಸರು ಪತ್ತೆಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಪಚ್ಚನಾಡಿ ದೇವಿನಗರದ ಮಂಜ(37) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಗಳು 2014 ರ ಜ.2 ರಂದು ಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಅಂಬಿಕಾ ನಗರ ಎಂಬಲ್ಲಿ ವಾಸವಾಗಿರುವ ಪದ್ಮನಾಭ ಪೂಜಾರಿ ಎಂಬವರ ಮನೆಯ ಹಿಂದಿನ ಬಾಗಿಲು ಮುರಿದು ಬೆಡ್ ರೂಂ ನಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದು ಲಾಕರ್ ನಲ್ಲಿದ್ದ ಸುಮಾರು 32 ಗ್ರಾಂ ತೂಕದ ಬಂಗಾರದ ಕರಿಮಾಣಿ ಸರ, ಸುಮಾರು 3 ½ ಪವನ್ ತೂಕದ ಹವಳದ ಸರ, ಸುಮಾರು 2 ಪವನ್ ತೂಕದ ಮುತ್ತಿನ ಸರ,ಸುಮಾರು 1 ½ ಪವನ್ ತೂಕದ ಸಾದಾ ಚೈನ್, ಲಕ್ಷ್ಮೀ ಪೆಂಡೆಂಟ್ ಇರುವ ಹವಳದ ಸಣ್ಣ ಚೈನ್ - 1, ಸುಮಾರು 1 ¼ ಪವನ್ ತೂಕ ಮುತ್ತಿನ ಬೆಂಡೋಲೆಗಳ ಸಹಿತ ಒಟ್ಟು ಸುಮಾರು 100 ಗ್ರಾಂ ತೂಕದ 2,00,000/- ಲಕ್ಷ ರೂ ಬೆಲೆಯ ಚಿನ್ನಾಭರಣಗಳು ಕಳವು ಮಾಡಿದ್ದರು.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್. ಜೈನ್ IPS ರವರ ಮಾರ್ಗದರ್ಶನದಂತೆ, DCP ಯವರಾದ ಅಂಶುಕುಮಾರ್ (ಕಾ&ಸು) ಮತ್ತು ದಿನೇಶ್ ಕುಮಾರ (ಅ ಮತ್ತು ಸಂ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್, ಸಿಬ್ಬಂದಿಯವರಾದ ಪಿ.ಎಸ್.ಐ ಪೂವಪ್ಪ, ಗುರು ಕಾಂತಿ, ಎ.ಎಸ್.ಐ ರಾಮಣ್ಣ, ರೋಹಿತ್, ಜಗದೀಶ್, ಸುಜನ್ ಮತ್ತು ಇತರರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.