ಮೊರಾಸ್ ಚ್ಯಾರಿಟೇಬಲ್ ಫೌಂಡೇಶನ್ ನ ದಶಮಾನೋತ್ಸವ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ
ಕೈಕಂಬ:ಕುಪ್ಪೆಪದವು ಪರಿಸರದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಮಾಜಮುಖಿ ಸೇವಾಸಂಸ್ಥೆಯಾದ ಕುಪ್ಪೆಪದವು ಮೊರಾಸ್ ಚ್ಯಾರಿಟೇಬಲ್ ಫೌಂಡೇಶನ್ ನ ದಶಮನೋತ್ಸವ ಕಾರ್ಯಕ್ರಮವು ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆ ಕುಪ್ಪೆಪದವಿನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಚರ್ಚ್ ನ ಧರ್ಮಗುರು ರೆ.ಫಾ.ಎಡ್ವಿನ್ ಪಿಂಟೋರವರು ಉದ್ಘಾಟಿಸಿ, ಮಾತನಾಡಿ ಅರ್ಥಿಕವಾಗಿ ಹಿಂದುಳಿದ ಹಾಗೂ ಸಮಾಜದ ವಿವಿಧ ವರ್ಗದ ವಿದ್ಯಾರ್ಥಿಗಳನ್ನು ಹಾಗೂ ಜನರನ್ನು ಗುರುತಿಸಿ, ಅವರ ಅಗತ್ಯತೆಗಳನ್ನು ಅರಿತು, ತಾವು ನೀಡುವ ಆರ್ಥಿಕ ನೆರವು ಅರ್ಥಪೂರ್ಣ ಮತ್ತು ಫಲದಾಯಕವಾದದ್ದು ಹಾಗೂ ಕಳೆದ ಹತ್ತು ವರ್ಷಗಳ ಫಲಪ್ರದ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಈ ಪರಿಸರದಲ್ಲಿ ಜನಮನ್ನಣೆಯನ್ನು ಪಡೆದಿದೆ ಎಂದು ಟ್ರಸ್ಟ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭ ಟ್ರಸ್ಟ್ ನ ವೆಬ್ಸೈಟ್ ಅನ್ನು ಲೋಕಾರ್ಪಣೆ ಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಟ್ರಸ್ಟ್ ನ ಚೇರ್ಮನ್ ಹಾಗೂ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ವಿಶ್ರಾಂತ ಆರ್ಚ್ ಬಿಷಪ್ ವಂದನೀಯ ಪರಮಪೂಜ್ಯ ಡಾ. ಬರ್ನಾಡ್ ಮೊರಾಸ್ ಮಾತನಾಡಿ ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡಿ, ಸಮಾಜದಿಂದ ಪಡೆದಿದ್ದನ್ನು, ಸಮಾಜಕ್ಕೆ ಹಿಂದಿರುಗಿಸುವ ಸಾರ್ಥಕತೆಯನ್ನು ಬೆಳೆಸಬೇಕು ಹಾಗೂ ಯಶಸ್ವಿ ನಾಯಕರಾಗಿ ಸಫಲತೆಯತ್ತ ಸಾಗಬೇಕು ಮತ್ತು ದೇಶ ಕಟ್ಟುವ ಕಾಯಕದಲ್ಲಿ ತೊಡಗಿ, ಸಾಮಾಜಿಕ ಜವಾಬ್ದಾರಿಯನ್ನು ಬದ್ದತೆಯಿಂದ ನಿರ್ವಹಿಸಬೇಕು. ಪರಿಸರದ ಸೇನಾನಿಗಳಾಗಿ, ಹಸಿರು ಮತ್ತು ಸ್ವಚ್ಛ ಭೂಮಿ ನಿರ್ಮಾಣದತ್ತ ಕೈಜೋಡಿಸಲು ಕರೆ ನೀಡಿದರು.
ಬಂಟ್ವಾಳ ಸಜಿಪನಡು ಅರೋಗ್ಯ ಕೇಂದ್ರದ ಸಮಾಲೋಚಕಿ ಶ್ರೀಮತಿ ಸುಮನಾ ಕ್ರಾಸ್ತಾ ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯ, ಲೈಂಗಿಕತೆ, ಲಿಂಗ-ಸಮಾನತೆಯ ಬಗ್ಗೆ ತಿಳಿದುಕೊಳ್ಳಬೇಕು. ಜಂಕ್ ಪುಡ್ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುವ ಆಹಾರ ಪದ್ಧತಿಯನ್ನು ತ್ಯಜಿಸಬೇಕು ಎಂದು ಸಲಹೆಯನ್ನು ನೀಡಿದರು.
ದಶಮಾನೋತ್ಸವ ಕಾರ್ಯಕ್ರಮದ ನೋಡಲ್ ಶಿಕ್ಷಕ ಮಾರ್ಕ್ ಮೆಂಡೊನ್ಸಾರವರು, ಟ್ರಸ್ಟ್ ನ ಹತ್ತು ವರ್ಷಗಳ ಬೆಳವಣಿಗೆ, ಸಮಾಜಮುಖಿ ಕಾರ್ಯಕ್ರಮಗಳು, ಸಾಧನೆಗಳನ್ನು ವರದಿ ಮತ್ತು ಸಾಕ್ಷ್ಯಚಿತ್ರದ ಮೂಲಕ ಪ್ರಸ್ತುತಪಡಿಸಿದರು.
ಎಸ್.ಡಿ.ಎಂ.ಸಿ ಸದಸ್ಯ ಶೇಖ್ ಅಬ್ದುಲ್ಲಾರವರು ಟ್ರಸ್ಟ್ ಮತ್ತು ಶಾಲಾಡಳಿತ ಸಮಿತಿಯ ಒಡನಾಟ ಮತ್ತು ಶಾಲಾಭಿವೃದ್ಧಿಯಲ್ಲಿ ಟ್ರಸ್ಟ್ ನ ಪಾತ್ರವನ್ನು ಸ್ಮರಿಸಿ, ಕಾರ್ಯ ವೈಖರಿಯನ್ನು ಪ್ರಶಂಶಿಸಿದರು ಹಾಗೂ ಇನ್ನಷ್ಟು ಶಾಲಾ ಮೂಲಭೂತ ಅಗತ್ಯತೆಗಳಿಗೆ ಟ್ರಸ್ಟ್ ನ ಸಂಪೂರ್ಣ ಸಹಕಾರವನ್ನು ಕೋರಿದರು.
ಕಾರ್ಯಕ್ರಮದಲ್ಲಿ 2026 ರ ಎಸ್.ಎಸ್.ಎಲ್.ಸಿ. ಯಲ್ಲಿ ಉನ್ನತ ಅಂಕಗಳನ್ನು ಪಡೆದ ಕಿಲೆಂಜಾರು ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಂಗಳೂರಿನ ವಿವಿಧೆಡೆ ಉನ್ನತ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಮತ್ತು ಆರ್ಥಿಕ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ , ಕಲ್ಲಾಡಿ ಪ್ರಾಥಮಿಕ ಶಾಲೆಗೆ ಕಪಾರ್ಟ್, ಕಿಲೆಂಜಾರು ಪ್ರೌಢಶಾಲೆಗೆ ಇನ್ವರ್ಟರ್ ನ್ನು ಸಾಂಕೇತಿಕವಾಗಿ ಮುಖ್ಯ ಶಿಕ್ಷಕರಿಗೆ ಟ್ರಸ್ಟ್ ನ ಚೇರ್ಮೆನ್ ಹಾಗೂ ಟ್ರಸ್ಟೀಗಳು ವಿತರಿಸಿದರು.
ಫೌಂಡೇಶನ್ ನ ಹಿತೈಷಿಗಳಾದ ಬೆಂಗಳೂರು ಬ್ರಿಲಿಯಂಟ್ ಪ್ರಿಂಟರ್ಸ್ ನ ಪೀಟರ್ ಅನಿಲ್ ರೇಗೊರವರು, ತಾವು ಉದ್ಯಮ ಕ್ಷೇತ್ರದಲ್ಲಿ ಬೆಳೆದುಬಂದ ಬಗೆ ಹಾಗೂ ಆರ್ಥಿಕ ಸ್ವಾವಲಂಬನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾ ನುಡಿಗಳನ್ನು ನೀಡಿ, ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ದಶಮನೋತ್ಸವದ ಅಂಗವಾಗಿ ಎಲ್ಲಾ ಶಿಕ್ಷಕರು, ದಾನಿಗಳು, ವಿದ್ಯಾರ್ಥಿಗಳು, ಸಾಧಕರು, ಫಲಾನುಭವಿಗಳು ಹಾಗೂ ಸಮಿತಿ ಸದಸ್ಯರಿಗೆ ಬ್ಯಾಗ್ ಗಳನ್ನು ವಿತರಿಸಲಾಯಿತು.
ಸಭಾ ವೇದಿಕೆಯಲ್ಲಿ ಟ್ರಸ್ಟ್ ನ ರೆಜಿನಾಲ್ಡ್ ಮೊರಾಸ್, ಜೋನ್ ಕ್ರೂಜ್ ಮೊರಾಸ್, ಮಾರ್ಟಿನ್ ಮೊರಾಸ್, ಜೋಸೆಫ್ ಮೊರಾಸ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಸುಧೀರ್ ಜೈನ್, ಸದಸ್ಯರಾದ ಶಶಿಧರ್ ಶೆಟ್ಟಿ, ತಿಮಪ್ಪ ಶೆಟ್ಟಿ, ಸುಂದರಶಾಂತಿ , ಶಿಕ್ಷಕರಾದ ವಿಮಲಾ,ಉಷಾ, ಉದಯಕುಮಾರ್, ತುಳಸಿ,ನೇತ್ರ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತಿರಿದ್ದರು
ಮುಖ್ಯ ಶಿಕ್ಷಕ ಬಾಬು ಪಿ.ಎಂ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರೋಮನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟೀ ಜೋಸೆಫ್ ಮೊರಾಸ್ ರವರು ವಂದನಾರ್ಪಣೆಗೈದರು. .