ಹಳೆಯಂಗಡಿ: ಚಲಿಸುತ್ತಿದ್ದ ರೈಲು ಬಡಿದು ಓರ್ವನ ಸಾವು
ಹಳೆಯಂಗಡಿ : ರೈಲು ಚಲಿಸುತ್ತಿದ್ದಾಗಲೇ ಗೇಟ್ ದಾಟಲು ಯತ್ನಿಸಿದ ಓರ್ವ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಳೆಯಂಗಡಿಯ ಇಂದಿರಾನಗರ ರೈಲ್ವೇ ಗೇಟ್ ನಲ್ಲಿ ಸೋಮವಾರ ಸಂಜೆ ನಡೆದಿದೆ.
ಒರಿಸ್ಸಾ ಮೂಲದ ಜಗ (40) ಮೃತಪಟ್ಟವರು ಎಂದು ತಿಳಿದುಬಂದಿದೆ. ಇವರು ತೋಕೂರು ಸಮೀಪದ ಫ್ಲೈವುಡ್ ಫ್ಯಾಕ್ಟರಿ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.
ಹಳೆಯಂಗಡಿ ಪೇಟೆಯಿಂದ ಇಂದಿರಾನಗರ ಕಡೆ ನಡೆದುಕೊಂಡು ಹೋಗುತ್ತಿರುವಾಗ ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಬಲಿ ರೈಲು ಚಲಿಸುತ್ತಿದ್ದಾಗಲೇ ಹಳಿದಾಟಲು ಮುಂದಾಗಿದ್ದರು ಎನ್ನಲಾಗಿದೆ. ಅಲ್ಲಿ ಸಾರ್ವಜನಿಕರು ಎಷ್ಟು ಬೊಬ್ಬೆ ಹಾಕಿ ಹಿಂದಕ್ಕೆ ಬರುವಂತೆ ಕರೆದರೂ ಮದ್ಯದ ಅಮಲಿನಲ್ಲಿ ಮತ್ತೂ ಮುಂದೆ ಹೋದಾಗ ರೈಲು ಬಡಿದು ಸ್ಥಳದಲ್ಲೇ ಮೃತಪಟ್ಟರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆಯಿಂದಾಗಿ ಕೆಲವು ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಮುಲ್ಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.