ಕಿನ್ನಿಗೋಳಿ ಯುಗಪುರುಷ ನೇತೃತ್ವದಲ್ಲಿ ಪು. ಶ್ರೀ. ಸ್ಮೃತಿ ದಿನ
ಕಿನ್ನಿಗೋಳಿ : ಯುಗಪುರುಷ ನೇತೃತ್ವದಲ್ಲಿ ವಿದ್ವಾಂಸ, ಅಧ್ಯಾಪಕ, ಕಲಾವಿದ, ಸಂಶೋಧಕ ದಿ. ಪು.ಶ್ರೀನಿವಾಸ ಭಟ್ ಕಟೀಲು ಇವರ ಸಂಸ್ಮರಣಾ ಸಮಾರಂಭವು ಇದೇ ಜುಲೈ 11ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿದೆ. ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ. ಶುಭಾಶಂಸನೆಯನ್ನು ಶ್ರೀ ಕ್ಷೇತ್ರ ಕಟೀಲಿನ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣರು ಮಾಡಲಿರುವರು. ಪು. ಶ್ರೀ ಪ್ರಶಸ್ತಿಯನ್ನು ಡಾ. ಎಂ. ಪ್ರಭಾಕರ ಜೋಶಿಯವರಿಗೆ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆ ವಿ.ವಿ.ಯ ಪ್ರಸಾರಾಂಗ ವಿಭಾಗದ ಪ್ರಧಾನ ಸಂಪಾದಕರಾದ ಡಾ. ಶ್ರೀನಿವಾಸ ಎನ್. ಆಚಾರ್ಯ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶೀ ಪ್ರದೀಪ ಕುಮಾರ ಕಲ್ಕೂರರವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪು.ಶ್ರೀ ಸ್ಮೃತಿ ಕೃತಿಯನ್ನು ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಬಿಡುಗಡೆಗೊಳಿಸಲಿರುವರು. ಪು. ಶ್ರೀ. ಬೃಹತ್ ಲೇಖನ ಸಂಪುಟ ಸಂಸ್ಕೃತಿ ಸಿರಿ ಸಂಪದದ ಅವಲೋಕನ ಜರಗಲಿದೆ. ಡಾ. ಪಾದೆಕಲ್ಲು ವಿಷ್ಣು ಭಟ್, ಶ್ರೀ ಶ್ರೀಧರ ಡಿ.ಎಸ್., ಡಾ| ಎಕ್ಕಾರು ಪದ್ಮನಾಭ ಭಟ್, ಡಾ| ಬಿ. ಜನಾರ್ದನ ಭಟ್, ಡಾ| ಪೃಥ್ವೀರಾಜ ಕವತ್ತಾರು ಇವರು ಪು. ಶ್ರೀನಿವಾಸ ಭಟ್ ಇವರ ಗ್ರಂಥಗಳ ವಿಮರ್ಶೆ, ಸಾಧನೆಗಳ ಕುರಿತು ಮಾತನಾಡಲಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮಕ್ಕಳ ಮೇಳ (ರಿ.) ಕಟೀಲು ಇವರಿಂದ ಶ್ರೀ ಕೃಷ್ಣಲೀಲೆ ಯಕ್ಷಗಾನ ಜರಗಲಿದೆ ಎಂದು ಯುಗಪುರುಷದ ಕೆ. ಭುವನಾಭಿರಾಮ ಉಡುಪ ಹಾಗೂ ಪು. ಗುರುಪ್ರಸಾದ ಭಟ್ರವರು ತಿಳಿಸಿದ್ದಾರೆ.