Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿಲೆಂಜೂರು ಸಮೀಪ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸು ಸಾವು

ಕಿನ್ನಿಗೋಳಿ  : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಅಮಾಯಕ ಹಸು ಮೃತಪಟ್ಟ ಘಟನೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರು ಅಮಣಬೆಟ್ಟು ನಲ್ಲಿ ನಡೆದಿದೆ.

ಕಿಲೆಂಜೂರು ಅಮಣಬೆಟ್ಟು ಮಾಗಂದಡಿ ಶೇಖರ ಶೆಟ್ಟಿಯವರ ಹಾಲು ಕರೆಯುವ ಹಸು ಇದಾಗಿದ್ದು, ಬೆಳಿಗ್ಗೆ ಹಾಲು ಕರೆದು ಮೇವಿಗಾಗಿ ಹೊರಗೆ ಕಟ್ಟಲು ಹೋದಾಗ ಅನತಿ ದೂರದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಇದನ್ನು ಸ್ಥಳೀಯರು ಅಥವಾ ಮನೆಯವರು ಗಮನಿಸದ ಕಾರಣ, ಹಸು ವಿದ್ಯುತ್ ತಂತಿಯನ್ನು ತುಳಿದು ಸಾವನ್ನಪ್ಪಿದೆ.

ಕೂಡಲೇ ವಿದ್ಯುತ್‌ ತಂತಿಯಲ್ಲಿ ಹರಿಯುತ್ತಿದ್ದ ವಿದ್ಯುತ್‌ ಪ್ರಸರಣ ಮೇಲುಗಡೆಗೊಳಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ.

ಈ ಭಾಗದಲ್ಲಿನ ವಿದ್ಯುತ್ ತಂತಿ ಅತ್ಯಂತ ಹಳೆಯದಾಗಿದ್ದು ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರು ಮೆಸ್ಕಾಂ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.