Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಾವಿಗೆ ಹಾರಿ ಅತ್ಮಹತ್ಯೆ ,ಕಿನ್ನಿಗೋಳಿಯಲ್ಲಿ ಘಟನೆ

ಕಿನ್ನಿಗೋಳಿ:ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಅತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕಿನ್ನಿಗೋಳಿಯಲ್ಲಿ ನಡೆದಿದೆ.
ಪುಂಜಾಲಕಟ್ಟೆಯ ನಿವಾಸಿ ರಮೇಶ್ ಪೂಜಾರಿ(40) ಮೃತರು.ಕಿನ್ನಿಗೋಳಿಯ ಖಾಸಗಿ ಬೇಕರಿಯೊಂದರಲ್ಲಿ  18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಮೇಶ್ ಅವರು  ಬೇಕರಿ ಫ್ಯಾಕ್ಟರಿಯಲ್ಲೇ ವಾಸವಿದ್ದರು. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಅವರು ಸಾಧು ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಬೆಳಿಗ್ಗೆ ಅವರು ಎಂದಿನಂತೆ  ಬೇಕರಿಗೆ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಹುಡುಕಾಟ ನಡೆಸಿದರು. ಈ ವೇಳೆ ಬಾವಿಯ ಸಮೀಪ ಅವರ ಪಾದರಕ್ಷೆಗಳು ಪತ್ತೆಯಾಗಿದ್ದು  ಅನುಮಾನಗೊಂಡು ಬಾವಿಯಲ್ಲಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜೀವರಕ್ಷಕ ಆಂಬುಲೆನ್ಸ್ ತಂಡದ ದಾವೂದ್, ಪ್ರಸಾದ್ ಕೇಚು, ಜಲಾಲ್, ಅಖ್ತರ್,  ಸ್ಥಳೀಯರಾದ ಪ್ರವೀಣ್ ಕಾಪಿಕಾಡ್ ಹಾಗೂ ಸ್ಥಳೀಯರ  ಸಹಕಾರದೊಂದಿಗೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಮೃತರು ತಾಯಿ, ಓರ್ವ ಸಹೋದರ, ಓರ್ವ ಸಹೋದರಿ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.