Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಡಾ. ಜಿ.ಪರಮೇಶ್ವರ್ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರು : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ

ಬೆಂಗಳೂರು : ರಾಜಕೀಯವಾಗಿ ತಮ್ಮ ವೈಯುಕ್ತಿಕ ಸಾಮರ್ಥ್ಯದ ಜೊತೆಗೆ ಧಾರ್ಮಿಕ ನಂಬಿಕೆಯ ಶಕ್ತಿಯ ಬಲದಿಂದ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಅವರು ಉನ್ನತ ಸ್ಥಾನಮಾನದಲ್ಲಿದ್ದರೂ ಸಹ ಸರಳತೆಯ ಜೀವನ ಹಾಗೂ ನಿಷ್ಠೆ, ಪ್ರಾಮಾಣಿಕತೆಯಿಂದ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರಾಗಿದ್ದಾರೆ. ಶೈಕ್ಷಣಿಕವಾಗಿ ಶಿಕ್ಷಣ ತಜ್ಞರಾಗಿ, ಸಾಮಾಜಿಕ ಚಿಂತಕರಾಗಿ ತಾನು ಬೆಳೆದು ಸರ್ವಧರ್ಮದ ಸಮಾಜವೂ ಬೆಳೆಯಬೇಕೆಂಬ ಉದಾತ್ತ ಮನೋಭಾವನೆಯ ಅಪರೂಪದ ರಾಜಕಾರಣಿ ಎಂದು  ಆಧ್ಯಾತ್ಮಿಕ ವಿಶ್ವ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು 
 ಅವರು ಬೆಂಗಳೂರಿನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರನ್ನು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಅಭಿಮಾನಿಗಳ ಪರವಾಗಿ  ಸನ್ಮಾನಿಸಿ ಆಶೀರ್ವಚನ ನೀಡಿದರು.
 ಸನ್ಮಾನಕ್ಕೆ ಪ್ರತಿಕ್ರಿಯಿಸಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಜೀವನದಲ್ಲಿ ಎಷ್ಟೇ ದೊಡ್ಡ ಸ್ಥಾನಮಾನ ಸಿಕ್ಕರೂ ಸಹ ನಮ್ಮ ಕಾರ್ಯಪ್ರವೃತ್ತಿಯಲ್ಲಿ ಬದಲಾವಣೆಯಿಲ್ಲ, ನಮ್ಮ ಜವಬ್ದಾರಿಯನ್ನು ಅರಿತು ನಮ್ಮ ಕೆಲಸವನ್ನು ಜನರಪರವಾಗಿ ಮಾಡುವುದೇ ನಮ್ಮ ಮೊದಲ ಆದ್ಯತೆ. ಧಾರ್ಮಿಕ ಚಿಂತನೆಯಲ್ಲಿ ಸದಾ ಮಾರ್ಗದರ್ಶನ ನೀಡುತ್ತಾ ಬಂದಿರುವ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವೆಯನ್ನು ಹತ್ತಿರದಿಂದ ಕಂಡಿದ್ದೇನೆ, ಅವರ ಸಮಾಜ ಕಾರ್ಯವೂ ವಿಭಿನ್ನವಾಗಿ ಅರ್ಹರನ್ನು ತಲುಪುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಹಾಗೂ ಶ್ರೀಮತಿ ಕನ್ನಿಕಾ ಪರಮೇಶ್ವರ್ ಅವರಿಗೆ ಪ್ರಭಾವಳಿ ಸಹಿತ ತಿರುಪತಿ ದೇವರ ಮೂಲ ವಿಗ್ರಹದ ಜೊತೆಗೆ ವಿಶೇಷ ಪ್ರಸಾದವನ್ನು ಸ್ವಾಮೀಜಿಯವರು ನೀಡಿ ದಂಪತಿಯನ್ನು  ಆಶೀರ್ವದಿಸಿದರು.
 ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ಆಶ್ರಮದ ಸೇವಾ ಚಟುವಟಿಕೆಯ ಮುಖ್ಯಸ್ಥ ರಾಹುಲ್ ಸಿ. ಭಟ್, ಕಾನೂನು ಸಲಹೆಗಾರರಾದ ರೋಶಿನಿ ರಾಘವ್ ಸೂರ್ಯ, ಆಶ್ರಮದ ಗೌರವ ಸಲಹೆಗಾರರಾದ ರಾಘವ ಸೂರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.  
ಸೇವಾ ಕಾರ್ಯಕ್ರಮದ ಸಂಯೋಜಕ ನರೇಂದ್ರ ಕೆರೆಕಾಡು ಸ್ವಾಗತಿಸಿದರು, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.