ಸಸಿಹಿತ್ಲು:ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತ
Friday, February 6, 2026
ಹಳೆಯಂಗಡಿ : ಸಸಿಹಿತ್ಲುವಿನ ಬಿಲ್ಲವರ ಹಿತವರ್ಧಕ ಸಂಘ ಸಂಚಾಲಕತ್ವದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರದಂದು ಹಳೆಯಂಗಡಿಯ ಶ್ರೀ ವೇದಮೂರ್ತಿ ಎಚ್.ರಂಗನಾಥ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಬೆಳಿಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ ಸ್ವಸ್ತಿ ಪುಣ್ಯಾಹವಾಚನ ,ದೇವನಾಂದಿ ,ಅದ್ರ ಣಯಾಗ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆಯು ನಡೆಯಿತು.
ಕಾಂತಾಬಾರೆ ಬೂದಬಾರೆ ಭಜಕ ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಬೆಳಿಗ್ಗಿನಿಂದ ಮಧ್ಯಾಹ್ನದ ತನಕ ಭಜನಾ ಸಂಕೀರ್ತಣೆಯು ನಡೆಯಿತು.
ಸಂಜೆ ಮುಕ್ಕದ ಸತ್ಯಧರ್ಮ ದೇವಿ ದೇವಸ್ಥಾನದಿಂದ ಸಸಿಹಿತ್ಲುವಿನ ಗರೋಡಿ ತನಕ ಹಸಿರು ಹೊರೆ ಕಾಣಿಕೆಯ ಭವ್ಯ ಮೆರವಣಿಗೆ ಹಾಗೂ ಸಂಜೆ ವಾಸ್ತು ಬಲಿ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭ ವೇದಮೂರ್ತಿ ಎಚ್ .ರಂಗನಾಥ ಭಟ್ , ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ,ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಮಾಜಿ ಅಧ್ಯಕ್ಷ
ಡಾ.ರಾಜಶೇಖರ ಕೋಟ್ಯಾನ್ ,
ಉದ್ಯಮಿ ಧನಂಜಯ ಶೆಟ್ಟಿ, ಹಳೆಯಂಗಡಿ ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ, ಪಡು ಪಣಂಬೂರು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಕೋಟ್ಯಾನ್ , ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.