-->

ಕಟೀಲಿನ ’ಚಿತ್ರಕೂಟ’ದಲ್ಲಿ ಭಾಗವಹಿಸಲು ಚಿತ್ರಕಲಾವಿದರಿಗೆ ಆಹ್ವಾನ

ಕಟೀಲಿನ ’ಚಿತ್ರಕೂಟ’ದಲ್ಲಿ ಭಾಗವಹಿಸಲು ಚಿತ್ರಕಲಾವಿದರಿಗೆ ಆಹ್ವಾನ


ಕಟೀಲು:ಕಟೀಲು ದೇಗುಲದ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಪ್ರಕೃತಿ ವಿಸ್ಮಯ. ಕಟೀಲು ದೇಗುಲ ಹಾಗೂ ಮೂಲಸ್ಥಳವೆಂದು ನಂಬಲಾಗಿರುವ ಈ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಎರಡು ಪುಟ್ಟ ದ್ವೀಪಗಳು. ಇವೆರಡೂ ಆಧ್ಯಾತ್ಮದ ಧ್ಯಾನಾಸಕ್ತರಿಗೆ ವಿಶಿಷ್ಟ ಅನುಭವ ನೀಡಬಲ್ಲ ಆರಾಧನಾ ಕೇಂದ್ರಗಳು.
ಬರವ ನೀಗಲು ಭುವಿಗೆ ಬಾರೆಂಬ ಮುನಿ ಜಾಬಾಲಿಯ ಪ್ರಾರ್ಥನೆಯನ್ನು ತಿರಸ್ಕರಿಸಿದ ಕಾಮಧೇನುವಿನ ಮಗಳು ನಂದಿನಿ, ಶಾಪದಿಂದ  ನದಿಯಾಗಿ ಹರಿದಳು. ಕೊಟ್ಟ ಅಭಯದಂತೆ ದೇವಿ ದುರುಳ ಅರುಣಾಸುರನ ತರಿದು ಕಟೀಲಿನಲ್ಲಿ ನೆಲೆಯಾದಳು. ಇದು ಪುರಾಣದ ಕತೆ. ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ನಂದಿನಿಯಾಗಿ ಮುಂದುವರಿಯುತ್ತದೆ. ದುರ್ಗಾಪರಮೇಶ್ವರಿ ಭ್ರಮರರೂಪ ತಾಳಿರುವುದೂ ಒಂದರ್ಥದಲ್ಲಿ ಪ್ರಕೃತಿ ಆರಾಧನೆಯ ಸಂಕೇತ. ಕಟೀಲಿನ ಕುದ್ರು ನಾಗಾರಾಧನೆಗೆ ಸಾಕ್ಷಿಯಾಗಿ ಪ್ರಕೃತಿ ಆರಾಧನೆಯ ಸ್ಥಳವಾಗಿದೆ.
ಸಾಹಿತ್ಯ ಸೃಷ್ಟಿಗೆ ಪ್ರೇರಣೆ ಸ್ಪೂರ್ತಿ ಪ್ರಕೃತಿ. ನಂದಿನಿಯ ನಿನಾದದೊಂದಿಗೆ ಎರಡು ವೇದಿಕೆಗಳಲ್ಲಿ ಸಾಹಿತ್ಯ ಅರಳುವ ಸಮಯ; ಕಲಾಕಾರರ ಚಿತ್ತಗಳಲ್ಲಿ ಮೂಡುವ ಪ್ರಕೃತಿ; ಚಿತ್ತಾರವಾಗುವ ಬಗೆಯನ್ನು 2026 ಮಾರ್ಚ್ 1ರ ಭಾನುವಾರ ನಡೆಯುವ ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಟೀಲು ಕ್ಷೇತ್ರ ಪುರಾಣ, ನಂದಿನಿ ನದಿ, ಅದರ ಪಾವಿತ್ರ್ಯ, ಕಟೀಲಿನಲ್ಲಿ ಪ್ರಕೃತಿ ಆರಾಧನೆಯ ಕಲ್ಪನೆ, ಭ್ರಾಮರಿಯ ಆರಾಧನೆ, ನಾಗಾರಾಧನೆ, ಕಟೀಲಿನಲ್ಲಿ ಯಕ್ಷಗಾನದ ಮೂಲಕ ನಡೆಯುತ್ತಿರುವ ಕಲಾರಾಧನೆ, ಹಸಿವು ನೀಗಿಸುವ ಅನ್ನದಾನ, ವಿದ್ಯಾದಾನ ಹೀಗೆ ಯಾವುದೇ ವಿಚಾರವಾಗಿ ಚಿತ್ರಗಳನ್ನು ಬಿಡಿಸಬಹುದು. ಕಲಾವಿದರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕ್ಯಾನ್ವಾಸ್ ಹಾಗೂ ಬಣ್ಣ ನೀಡಲಾಗುವುದು. ಬಿಡಿಸಿದ ಚಿತ್ರವನ್ನು ಕಟೀಲು ದೇವಿಯ ಪದತಲಕ್ಕೆ ಸಮರ್ಪಿಸಿ ಧನ್ಯರಾಗಬಹುದು. ಸೂಕ್ತ ಸ್ಥಳದಲ್ಲಿ ಈ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಚಿತ್ರಕಾರರಿಗೆ ದೇವಿಯ ಪ್ರಸಾದ ನೀಡಲಾಗುವುದು.
ಈ ಸಮ್ಮೇಳನದ ಸಂದರ್ಭ ಚಿತ್ರ ಬಿಡಿಸುವ ಕಾರ್ಯಕ್ರಮಕ್ಕೆ ಇಟ್ಟಿರುವ ಹೆಸರು ಚಿತ್ರಕೂಟ. ಭಾಗವಹಿಸಲು ಇಷ್ಟಪಡುವವರು 2026ರ ಫೆಬ್ರವರಿ 25ರ ಒಳಗೆ ಹೆಸರು ತಿಳಿಸಬೇಕಾದ ಸಂಪರ್ಕ : ಸ್ವಾತಿ ಕುಲಾಲ್, 9686139426,, ಲೋಲಾಕ್ಷ ಕಿನ್ನಿಗೋಳಿ 9845362763 ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ