ಯುವಜನತೆಯಿಂದ ಭವಿತವ್ಯದ ಭವ್ಯ ಭಾರತ ನಿರ್ಮಾಣವಾಗಲಿ : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
Tuesday, January 13, 2026
ಬೆಂಗಳೂರು : ಯುವಜನತೆಯಲ್ಲಿ ವೃತ್ತಿ, ಜೀವನ ಕೌಶಲ್ಯ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶವನ್ನು ಪಡೆದುಕೊಳ್ಳಬೇಕು, ಸಮಾಜಘಾತುಕರಾಗದೇ, ಸಮಾಜ ಸೇವಕರಾಗಿ ಗುರುತಿಸಿಕೊಳ್ಳಿರಿ, ಭವ್ಯ ಭಾರತದ ನಿರ್ಮಾಣಕ್ಕೆ ಭವಿತವ್ಯದಲ್ಲಿ ಪ್ರಯತ್ನಿಸಿ, ರಾಷ್ಟ್ರೀಯ ಚಿಂತನೆಯೊಂದಿಗೆ ನಮ್ಮ ದೇಶದ ಮೌಲ್ಯಯುತ ಶಿಕ್ಷಣವನ್ನು ಪಡೆದುಕೊಂಡು, ಅಂತಾರಾಷ್ಟ್ಟೀಯ ಮಟ್ಟಕ್ಕೆ ಬೆಳೆಯುವಲ್ಲಿ ಸಫಲತೆಯನ್ನು ಪಡೆದುಕೊಳ್ಳಿರಿ, ಒರ್ವನ ಸಾಧನೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಬೇಕು ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು, ಆಧ್ಯಾತ್ಮಿಕ ವಿಶ್ವಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ನುಡಿದರು.
ಅವರು ಬೆಂಗಳೂರಿನ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಆಶ್ರಮದ ನಿರ್ದೇಶಕ ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರ ಜನ್ಮದಿನದ ಶುಭದಿನದಲ್ಲಿ ವಿಶೇಷವಾಗಿ ನಡೆದ ಸ್ವಾಮೀ ವಿವೇಕಾನಂದರ ರಾಷ್ಟ್ರೀಯ ಯುವದಿನದ ಚಿಂತನಾ ಕಾರ್ಯಕ್ರಮದಲ್ಲಿ "ವಿಶ್ವ ಯುವ ದಿನಾಚರಣೆ"ಯ ಕಾರ್ಯಕ್ರಮದಲ್ಲಿ ರಾಜ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ನ ಮೂಲಕ ವಿವಿಧ ಸೇವಾ ಚಟುವಟಿಕೆಯನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಜನವರಿ 12ರಂದು ಸ್ವಾಮೀ ವಿವೇಕಾನಂದರ ಜನ್ಮ ದಿನಾಚರಣೆಯಾದರೇ, ಜನವರಿ 11 ರಾಹುಲ್ ಚಂದ್ರಶೇಖರ್ ಅವರ ಹುಟ್ಟು ಹಬ್ಬದ ದಿನವಾಗಿದ್ದು ಈ ದಿನವನ್ನು ಯುವ ಸಮುದಾಯಕ್ಕೆ ಮೀಸಲಿಟ್ಟು, ಬೆಂಗಳೂರು ಹಾಗೂ ಮೂಲ್ಕಿಯಲ್ಲಿ ಯುವ ಜನರಿಗಾಗಿ ಚಿಂತನಾ ಮಂಥನ ಕಾರ್ಯಕ್ರಮ, ಸೇವಾ ಚಟುವಟಿಕೆಯಾಗಿ ಸರ್ಕಾರಿ ಶಾಲೆಗಳಿಗೆ ನೆರವು, ಆರ್ಥಿಕವಾಗಿ ಹಿಂದುಳಿದ ಹಿರಿಯರ ಆರೋಗ್ಯ ತಪಾಸಣೆ, ಯುವ ಸಾಧಕರಿಗೆ ಪುರಸ್ಕಾರ ಇನ್ನಿತರ ಕಾರ್ಯಕ್ರಮವನ್ನು ರಾಜ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಚಂದ್ರದಾರಿ ಸಿಂಗ್ ಹಾಗೂ ಸೀಮಾ ಕೌಲ್ ಅವರು ಭಾಗವಹಿಸಿ, ರಾಹುಲ್ ಚಂದ್ರಶೇಖರ್ ಅವರನ್ನು ಆಶ್ರಮದ ಅಭಿಮಾನಿಗಳ ಪರವಾಗಿ ವಿಶೇಷವಾಗಿ ಸನ್ಮಾನಿಸಿದರು.
ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ನಿರ್ದೇಶಕರಾದ ರಾಘವ ಸೂರ್ಯ, ಕಾನೂನು ಸಲಹೆಗಾರರಾದ ರೋಶ್ನಿ ಮತ್ತಿತರರು ಉಪಸ್ಥಿತರಿದ್ದರು.
ಸೇವಾಶ್ರಮದ ವಕ್ತಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಉದ್ಯೋಗದಾತ ರಾಹುಲ್ ಅವರಿಗೆ ವಿಶೇಷ ಸನ್ಮಾನ...
ಈ ಸಂದರ್ಭದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ಆತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರ ಹಾಗೂ ಪ್ರಚಾರ ಮಾಧ್ಯಮ ಕ್ಷೇತ್ರದಲ್ಲಿ ಉದ್ಯಮವನ್ನು ಆರಂಭಿಸಿ, ಯಶಸ್ಸಾಗಿ, ಹಲವಾರು ಪ್ರತಿಭಾವಂತ ಯುವಕರಿಗೆ ಉದ್ಯೋಗ ನೀಡಿ ಅನ್ನದಾತರಾಗಿರುವ ಜೊತೆಯಲ್ಲಿ ದುಡಿದ ಒಂದಂಶವನ್ನು ತಮ್ಮ ತಂದೆ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಹುಟ್ಟೂರಾದ ಮೂಲ್ಕಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಮುಡಿಪಾಗಿಟ್ಟು ಶೈಕ್ಷಣಿಕ ನೆರವಿನೊಂದಿಗೆ ಸಾಮಾಜಿಕ ಚಟುವಟಿಕೆಯನ್ನು ಸದ್ದಿಲ್ಲದೇ ನಡೆಸುತ್ತಿರುವ ಹಿನ್ನಲೆಯಲ್ಲಿ ಸಾಧಕ ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರನ್ನು ಅವರ ಅಭಿಮಾನಿಗಳು ಹಾಗೂ ಸೇವಾಶ್ರಮದ ಭಕ್ತರು ಸ್ವಾಮೀಜಿಯವರ ಸಮ್ಮುಖದಲ್ಲಿ ವಿಶೇಷವಾಗಿ ಪೇಟ ತೊಡಿಸಿ, ವಿಶೇಷ ವಿನ್ಯಾಸದ ಶಾಲಿನೊಂದಿಗೆ, ಆಕರ್ಷಕ ರೀತಿಯ ಸ್ಮರಣಿಕೆಯೊಂದಿಗೆ ಸನ್ಮಾನಿಸಿದ್ದು ಕಾರ್ಯಕ್ರಮದ ಶೋಭೆಯಾಗಿತ್ತು.