ಇಂದಿನ ಮಕ್ಕಳು ನಾಳೆಯ ರಾಷ್ಟ್ರ ನಿರ್ಮಾಣದ ಶಕ್ತಿಗಳು : ಲಕ್ಷ್ಮೀನಾರಾಯಣ ಆಸ್ರಣ್ಣ
Monday, December 15, 2025
ಮೂಲ್ಕಿ:ಇಂದಿನ ಮಕ್ಕಳು ನಾಳೆಯ ರಾಷ್ಟ್ರ ನಿರ್ಮಾಣದ ಶಕ್ತಿಗಳು. ಪ್ರತಿಭಾ ಸೌರಭದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಮತ್ತು ಹುಡುಕಾಟದ ಮನೋಭಾವವನ್ನು ಬೆಳಗಿಸುತ್ತವೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.ಅವರು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದೊಂದಿಗೆ ಮಕ್ಕಳ ಪ್ರತಿಭೆಯನ್ನು ಗುರುತಿ ಪ್ರೋತ್ಸಾಹಿಸಲು ಆಯೋಜಿಸಿದ ಪ್ರತಿಭಾ ಸೌರಭ - 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಪ್ರತಿಯೊಂದು ಪ್ರತಿಭೆಗಳ ಹಿಂದಿರುವ ಶ್ರಮ, ಮಾರ್ಗದರ್ಶನ ಮತ್ತು ಅಭ್ಯಾಸ ಸ್ಪಷ್ಟವಾಗಿ ಇದ್ದರೆ ಅಂತಹ ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಾದರೂ ಮೇಲುಗೈ ಸಾಧಿಸಿ ಸಫಲರಾಗುತ್ತಾರೆ ಎಂದರು. ಸ್ಪರ್ಧೆಯಲ್ಲಿ ಮೂಲ್ಕಿ ತಾಲೂಕಿನ ಪ್ರೌಢಶಾಲೆಯ ಸುಮಾರು 425 ವಿದ್ಯಾರ್ಥಿಗಳು ಪ್ರಬಂಧ, ಚಿತ್ರಕಲೆ, ಭಾಷಣ, ಕಸದಿಂದ ರಸ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಲಯನ್ಸ್ ಕ್ಲಬ್ ಮೂಲ್ಕಿಯ ಅಧ್ಯಕ್ಷ ಲ| ಹರ್ಷರಾಜ್ ಜಿ.ಎಂ, ಯುಗಪುರುಷ ಕಿನ್ನಿಗೋಳಿಯ ಕೋ. ಭುವನಾಭಿರಾಮ ಉಡುಪ, ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಪದಾಧಿಕಾರಿಗಳಾದ ಗೀತಾ ಶೆಟ್ಟಿ, ಶೋಭಾ ರಾವ್, ಕೊಡೆತ್ತೂರು ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತವಿಕವಾಗಿ ಮಾತನಾಡಿದರು. ಜನ ವಿಕಾಸ ಸಮಿತಿ ಮೂಲ್ಕಿಯ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯ ಜಿತೇಂದ್ರ ವಿ ರಾವ್ ಕಾರ್ಯಕ್ರಮ ನಿರೂಪಿಸಿದರು.