ರಾಷ್ಟ್ರಗೀತೆ 'ಜನ ಗಣ ಮನ' ಅವಮಾನಿಸಿದ ಸಂಸದ ಕಾಗೇರಿ ಸ್ಥಾನದಿಂದ ಕೂಡಲೇ ವಜಾ ಮಾಡಿ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಶೋಕ್ ಪೂಜಾರ್ ಒತ್ತಾಯ
Saturday, November 8, 2025
ಮೂಲ್ಕಿ :ರಾಷ್ಟ್ರಗೀತೆ 'ಜನ ಗಣ ಮನ' ಕುರಿತಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿರುವ ವಿವಾದಾತ್ಮಕ ಹೇಳಿಕೆ ರಾಷ್ಟ್ರದ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದು ಮೂಲ್ಕಿ ಬ್ಲಾಕ್ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಶೋಕ್ ಪೂಜಾರ್ ತೀವ್ರವಾಗಿ ಖಂಡಿಸಿದ್ದಾರೆ.
ಹೊನ್ನಾವರದಲ್ಲಿ ನಡೆದ ಏಕತಾ ಸಮಾವೇಶದಲ್ಲಿ ಮಾತನಾಡಿದ ಕಾಗೇರಿ ಅವರು ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಗಳ ಸ್ವಾಗತಕ್ಕಾಗಿ 'ಜನ ಗಣ ಮನ' ಅನ್ನು, ಹಾಗೂ ರಾಷ್ಟ್ರಗೀತೆಯಾಗಿ 'ವಂದೇ ಮಾತರಂ' ಅನ್ನು ರಚಿಸಿದ್ದರು" ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವುದು ರಾಷ್ಟ್ರಭಾವನೆಗೆ ಧಕ್ಕೆ ತಂದಂತಾಗಿದೆ ಎಂದು ಅಶೋಕ್ ಆರೋಪಿಸಿದರು.
ಬಿಜೆಪಿ ನಾಯಕರು ಕಳೆದ ಕೆಲ ವರ್ಷಗಳಿಂದ ಸಂವಿಧಾನ ವಿರೋಧಿ ಹಾಗೂ ದೇಶದ
ಜನತೆಗೆ ಅವಮಾನ ಮಾಡುವ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದು, ಇದೀಗ ರಾಷ್ಟ್ರಗೀತೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಇಳಿದಿದ್ದಾರೆ. ಇದು ಬಿಜೆಪಿಯ ಅಸಂಸ್ಕೃತ ರಾಜಕೀಯದ ಸ್ಪಷ್ಟ ನಿದರ್ಶನವಾಗಿದೆ ಎಂದು ಅಶೋಕ್ ಪೂಜಾರ್ ವಾಗ್ದಾಳಿ ನಡೆಸಿದರು.
ಈ ಹೇಳಿಕೆಯಿಂದ ದೇಶದ ಗೌರವ ಹಾಳಾಗಿದೆ. ಸಂಸದ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದು ಕೊಂಡಿರುವ ವಿಶ್ವೇಶ್ವರ ಕಾಗೇರಿ ರವರನ್ನು ರಾಷ್ಟ್ರಪತಿಗಳು ಕೂಡಲೇ ಸಂಸದ ಸ್ಥಾನದಿಂದ ವಜಾ ಮಾಡಬೇಕು. ಇಲ್ಲವಾದರೆ ಯುವ ಕಾಂಗ್ರೆಸ್ ಉಗ್ರ ಹೋರಾಟಕ್ಕೆ ಇಳಿಯುತ್ತದೆ ಎಂದು ಎಚ್ಚರಿಕೆ ನೀಡಿದರು.