ತೆಂಕು - ಬಡಗಿನ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ
ಕಿನ್ನಿಗೋಳಿ :ಕಿನ್ನಿಗೋಳಿ ಸಮೀಪದ ಕುಜಿಂಗಿರಿ ನಿವಾಸಿ ಮುಖ್ಯಪ್ರಾಣ ಕಿನ್ನಿಗೋಳಿ (84) ಅನಾರೋಗ್ಯದಿಂದ ಕಟೀಲು ಆಸ್ಪತ್ರೆಯಲ್ಲಿ ನಿಧನರಾದರು
ಅವರು ಪತ್ನಿ ಓರ್ವ ಪುತ್ರ ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ
ತೆಂಕು ಬಡಗಿನ ಖ್ಯಾತ ಯಕ್ಷಗಾನ ಹಾಸ್ಯಗಾರ ಕಲಾವಿದರಾಗಿದ್ದರು.
54ವರುಷಗಳಿಗೂ ಮಿಕ್ಕಿ ತೆಂಕು-ಬಡಗು ಯಕ್ಷಗಾನ ಕ್ಷೇತ್ರದಲ್ಲಿ ಸಾಧಕ ಕಲಾವಿದರಾಗಿ, ಕಟೀಲು ಮೇಳದಲ್ಲಿ ಇರಾ ಸುಬ್ರಹ್ಮಣ್ಯ ಪೆರ್ಡೂರು ಸಾಲಿಗ್ರಾಮ ಮಂದಾರ್ತಿ ಕದ್ರಿ ಮೇಳದ ಯಕ್ಷಗಾನ ಮೇಳದಲ್ಲಿ ಪೌರಾಣಿಕ ಪ್ರಸಂಗಗಳಲ್ಲಿ ಬಾವುಕ, ರಜಕ, ನಾರದ, ವಿಜಯ, ವೃದ್ಧಬ್ರಾಹ್ಮಣ, ಕಂದರ, ಮಂಥರೆ, ವಿದ್ಯುಜ್ಜಿಹ, ಶನಿ ಪೀಡಿತ ವಿಕ್ರಮ ಮುಂತಾದ ಪಾತ್ರಗಳು, ಕಾಲ್ಪನಿಕ ಪ್ರಸಂಗಗಳಲ್ಲಿ ಚೆಲುವೆ ಚಿತ್ರಾವತಿಯ ಅಡಗೂಲಜ್ಜಿ ಮತ್ತು ಮುರಳಿ ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನ ಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರ ಸೇನ ಹಾಗೂ ಕಲಿಕ್ರೋಧನದ ಮಡಿವಾಳ, ನಾಗಶ್ರೀಯ ಕೈರವನ ಪಾತ್ರಗಳ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದಿದ್ದವು.
ಯಕ್ಷಗಾನ ಇಲ್ಲದ ಸಂದರ್ಭದಲ್ಲಿ ಮನೆಯಲ್ಲೇ ಕೈಮಗ್ಗದಲ್ಲಿ ದುಡಿಯುತ್ತಿದ್ದರು. ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉಡುಪಿ ಕಲಾರಂಗದ ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ, ಕೋಡಿಮನೆ ವಾಸುಭಟ್ಟ ಪುರಸ್ಕಾರ ಸೇರಿದಂತೆ ನೂರಾರು ಸಂಮಾನ, ಗೌರವಗಳು ಸಂದಿದ್ದವು