ದುರ್ಬಲ ವರ್ಗದವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ನಿಂದ ಸಾಧ್ಯ - ಸಚಿವ ದಿನೇಶ್ ಗುಂಡೂರಾವ್
Friday, June 6, 2025
ತಾಲ್ಲೂಕು ಮಟ್ಟದಲ್ಲಿ ಜನರ ಅಹವಾಲು ಸ್ವೀಕಾರಕ್ಕೆ ಚಾಲನೆಯನ್ನು ಪ್ರತೀ ಜಿಲ್ಲೆಯಲ್ಲಿಯೂ ನಡೆಯಲಿದೆ. ಸರ್ಕಾರವು ನೀಡಿದ ಆಶ್ವಾಸನೆಗಳೊಂದಿಗೆ ಆಡಳಿತ ನಡೆಸುತ್ತಿದೆ ಜನರ ವಿಶ್ವಾಸ ಗಳಿಸುತ್ತಿವೆ ಇಂದು ಸ್ವೀಕರಿಸಿದ ಪ್ರತಿ ಅರ್ಜಿಗೆ ಸ್ಪಂದನೆ ನೀಡುವಂತಹ ಕೆಲಸ ಅಧಿಕಾರಿಗಳಿಂದ ನಡೆಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಅನುದಾನದ ಕೊರತೆಯಿಂದ ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ನಡೆಸಲು ಬಾಕಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ವಿಶೇಷ ಒತ್ತಡ ಹಾಕಿ ಅನುದಾನವನ್ನು ಒದಗಿಸಿಕೊಡಬೇಕು ಎಂದು ತಮ್ಮ ಮನವಿಯನ್ನು ಮೌಖಿಕವಾಗಿ ಸಲ್ಲಿಸಿದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾಯಿಸುವ ಬಗ್ಗೆ ಹರಿಡುತ್ತಿರುವುದು ಎಲ್ಲಾ ಸುಳ್ಳು, ದಿನೇಶ್ ಗುಂಡೂರಾವ್ ಅವರು ಪ್ರಾಮಾಣಿಕವಾಗಿ ತಮ್ಮ ಜವಬ್ದಾರಿ ನಿರ್ವಹಣೆ ನಡೆಸುತ್ತಿದ್ದಾರೆ ಎಂದರು.
ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ತಂಡವು, ಕಿನ್ನಿಗೋಳಿ ಮತ್ತು ಮೂಲ್ಕಿಯಲ್ಲಿನ ಇಂದಿರಾ ಕ್ಯಾಂಟಿನ್ಗೆ ಸ್ವತಹ ಉಪಹಾರವನ್ನು ಸೇವಿಸಿ, ಚಾಲನೆ ನೀಡಿದರು. ಕಿನ್ನಿಗೋಳಿ ಚರ್ಚ್ನಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು, ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.ಮೂಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ಆಡಳಿತ ಸೌಧಕ್ಕೆ ಭೇಟಿ ನೀಡಿ ಆಡಳಿತ ಸೌಧ ಕಟ್ಟಡಕ್ಕೆ ಕೊನೆಯ ಇನ್ನಷ್ಟು ಅನುದಾನ ಒದಗಿಸಿ ಮುಂದಿನ ಜುಲೈ ತಿಂಗಳನ್ನು ಉದ್ಘಾಟನೆ ನಡೆಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮಮತಾ ಗಟ್ಟಿ, ಮಿಥುನ್ ರೈ, ವಸಂತ ಬೆರ್ನಾಡ್, ಪ್ರಭಾರ ಜಿಲ್ಲಾಧಿಕಾರಿ ಸಂತೋಷ್ಕುಮಾರ್, ಯೋಜನಾ ಅಧಿಕಾರಿ ಜಯಲಕ್ಷ್ಮೀ, ತಹಶೀಲ್ದಾರ್ ಶ್ರೀಧರ ಎಸ್. ಮುಂದಲಮನಿ, ಮುಖ್ಯಾಧಿಕಾರಿ ಮಧುಕರ್, ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.
ಕಿನ್ನಿಗೋಳಿಯ ಚರ್ಚ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರಿಂದ 37 ಅಹವಾಲುಗಳನ್ನು ಸ್ವೀಕರಿಸಿದರು.
ಪುನರೂರು ಅನುದಾನಿತ ಶಾಲಾ ಸಮಸ್ಯೆ, ಕಿನ್ನಿಗೋಳಿ ರೇಷನ್ ವಿತರಣೆಗೆ ಪ್ರತ್ಯೇಕ ಸ್ಥಳಾವಕಾಶ, ಕಟೀಲು ಒಳರಸ್ತೆಯ ಅವ್ಯವಸ್ಥೆ, ಬಳ್ಕುಂಜೆ ಕೈಗಾರಿಕಾ ಪ್ರದೇಶಕ್ಕೆಂದು ನಿರ್ದೇಶಿತವಾಗಿರುವ ಜಮೀನಿಗೆ ಆಕ್ಷೇಪ, ವಸತಿ ನಿವೇಶನ, ಹಾಸ್ಟೆಲ್ನ ದುರಸ್ಥಿ, ವಿದ್ಯಾರ್ಥಿ ವೇತನ ಸಿಗುತ್ತಿಲ್ಲ, ಅರಿವು ಯೋಜನೆಗೆ ಆನ್ಲೈನ್ ಅಡಚಣೆ, ಪಾಂಪೈ ಕಾಲೇಜಿನ ಪಿಡಬ್ಲೂಡಿ ರಸ್ತೆಯ ಅವ್ಯವಸ್ಥೆ, ಕಿನ್ನಿಗೋಳಿ ಶಾಲಾ ಆವರಣದ ತಡೆಗೋಡೆ, ತಾಳಿಪಾಡಿಯಲ್ಲಿ ರಸ್ತೆಗೆ ಅಡ್ಡಿ, ಐಕಳದಲ್ಲಿ ರಸ್ತೆ ಕುಸಿಯುವುದಕ್ಕೆ ತಡೆಗೋಡೆ, ಎಳತ್ತೂರು ತ್ಯಾಜ್ಯ ಘಟಕಕ್ಕೆ ಆಕ್ಷೇಪ, ಕಟೀಲಿನಲ್ಲಿ ಗುಡ್ಡೆ ಕುಸಿತದ ಭೀತಿ, ಬಿತ್ತುಲ್ ಪರಿಸರದ ಬಾವಿ ಕಲುಷಿತ, ಅಗ್ನಿಶಾಮಕದಳ, ಐಕಳದ ಬೃಹತ್ ಆಲದಮರದಿಂದ ಅಡ್ಡಿ, ಕಿನ್ನಿಗೋಳಿ-ಗುತ್ತಕಾಡು ರಸ್ತೆ ಅಭಿವೃದ್ಧಿ, ಪೆರಂಕಿಲ ರಸ್ತೆಯ ಬಳಿ ಚರಂಡಿ, ಉಳೆಪಾಡಿ ಜಮೀನಿನ ಕಾನೂನು ತೊಡಕು, ಬಜಪೆ ಘನತ್ಯಾಜ್ಯಕ್ಕೆ ವಿರೋಧ, ಕಿನ್ನಿಗೋಳಿ ಬಸ್ ನಿಲ್ದಾಣ ಸ್ಥಳಾಂತರ, ಇ-ಖಾತೆಯ ಅವ್ಯವಸ್ಥೆಯೊಂದಿಗೆ ವಿವಿಧರೀತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಸಾರ್ವಜನಿಕರು ಮನವಿ ಮಾಡಿಕೊಂಡರು.