ಆಟಿಡೊಂಜಿ ದಿನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
Thursday, August 1, 2024
ಬಜಪೆ:ಹಿಂದಿನ ಕಾಲದಲ್ಲಿ ಆಟಿ ತಿಂಗಳು ತುಳುವರ ಕಷ್ಟದ ದಿನಗಳಾಗಿತ್ತು. ಆದರೆ ಇಂದಿನ ಮಕ್ಕಳಿಗೆ ಆಟಿ ಎನ್ನುವುದು ಸಂಭ್ರಮ ಸಡಗರದ ದಿನವಾಗಿದೆ. ಹೀಗಾಗಿ ಆಟಿ ಆಚರಣೆ ಇನ್ನಷ್ಟು ಸರಳವಾಗಬೇಕು. ಪ್ರಾಕೃತಿಕವಾಗಿ ಸಿಗುವಂತಹ ಆಹಾರ ಪದಾರ್ಥಗಳನ್ನು ತಯಾರು ಮಾಡುವ ಜೊತೆಗೆ ಮಕ್ಕಳಿಗೆ ಕಷ್ಟದ ದಿನಗಳನ್ನು ನೆನಪಿಸುವ ಪ್ರಯತ್ನವಾಗಬೇಕು. ಪ್ರಕೃತಿಯ ಮಡಿಲಿನಲ್ಲೇ ಕಾರ್ಯಕ್ರಮ ಆಯೋಜನೆ ಮಾಡಿದರೆ ಒಳ್ಳೆಯದು“ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗುಣಪಾಲ ದೇವಾಡಿಗ ಹೇಳಿದರು. ಅವರು ಹಳೆ ವಿದ್ಯಾರ್ಥಿ ಸಂಘ, ದ.ಕ.ಜಿ.ಪಂ. ಪ್ರಾಥಮಿಕ ಶಾಲೆ ಕರಂಬಾರು ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ , ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ನಡೆದ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ಅಧಿಕಾರಿ ಶಿವಣ್ಣ ವಿ.ಯಂ ಮಾತನಾಡಿ, ಹಿಂದಿನ ಆಟಿ ತಿಂಗಳಿಗೂ ಇಂದಿನ ಕಾಲಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಈಗಿನ ಮಕ್ಕಳಿಗೆ ನಮ್ಮ ಅಂದಿನ ಆಹಾರ ಪದ್ಧತಿಯನ್ನು ಪರಿಚಯಿಸುವ ಕೆಲಸವನ್ನು ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಮಾಡಿದೆ ಎಂದರು.
ನ್ಯಾಯವಾದಿ ಶೈಲಜಾ ರಾಜೇಶ್ ಅವರು, “ಹಿಂದಿನ ಕಾಲದಲ್ಲಿ ಆಟಿ ತಿಂಗಳು ತುಳುವರ ಕಷ್ಟದ ದಿನಗಳಾಗಿತ್ತು. ಬಿಡದೆ ಸುರಿಯುವ ಮಳೆಯಿಂದಾಗಿ ಜನರು ಸರಿಯಾಗಿ ತಿನ್ನಲು ಆಹಾರ ಇಲ್ಲದೆ ಪರಿತಪಿಸುತ್ತಿದ್ದರು. ಆಟಿ ತಿಂಗಳಿಗೆ ಬೇಕಾಗಿ ಅಗತ್ಯವಸ್ತು ಆಹಾರವನ್ನು ಸಾಕಾಗುವಷ್ಟು ಸಂಗ್ರಹಿಸಿ ಇಡುತ್ತಿದ್ದರು. ಪ್ರಕೃತಿದತ್ತವಾಗಿ ಸಿಗುವ ಸೊಪ್ಪು ತರಕಾರಿ ಮನುಷ್ಯನ ಆಹಾರವಾಗಿತ್ತು. ಹೀಗಾಗಿ ನಾವು ಆಟಿ ತಿಂಗಳ ಮಹತ್ವವನ್ನು ಅರಿತುಕೊಳ್ಳಬೇಕು” ಎಂದರು.
ಈ ಸಂದರ್ಭ ಹಳೆ ವಿದ್ಯಾರ್ಥಿ ಅಧ್ಯಕ್ಷ ಸತೀಶ್ ದೇವಾಡಿಗ, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಪ್ರಿತಾ ಶೆಟ್ಟಿ, ದ.ಕ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘ ಮಂಗಳೂರು ಇದರ ಅಧ್ಯಕ್ಷ ತುಷಾರ್ ಸುರೇಶ್, ಶ್ರೀ.ಕ್ಷೇ.ಧ.ಗ್ರಾ.ಯೋ ಟ್ರಸ್ಟ್ ನ ಮೇಲ್ವಿಚಾರಕಿ ಪ್ರೇಮಲತಾ, ಕರಂಬಾರು ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾಕಿರಣ,ಮಳವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ
ರಾಘವೇಂದ್ರ ಎಸ್,ಜಯೇಶ್, ಲೋಕೇಶ್ ಎಮ್. ಬಿ, ಯಶವಂತ್. ವಿ ಉಪಸ್ಥಿತರಿದ್ದರು. ನಿತೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ವಿಶ್ವನಾಥ್ ದೇವಾಡಿಗ ಸ್ವಾಗತಿಸಿ, ಗೀತಾ. ಎಮ್. ಪ್ರಸ್ತಾವನೆಗೈದರು, ಮಾಧವ ಅಮೀನ್ ವಂದಿಸಿದರು.