ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ವಾರ್ಷಿಕ ಮಹಾಸಭೆ
Tuesday, July 23, 2024
ಸುರತ್ಕಲ್: ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ 3ನೇ ವಾರ್ಷಿಕ ಮಹಾಸಭೆಯು ಸುರತ್ಕಲ್ ಸುಭಾಷಿತನಗರದ ಹೊಟೇಲ್ ಸೂರಜ್ ನ ಸಭಾಂಗಣದಲ್ಲಿ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು ಪ್ರಸ್ತಾವಿಕವಾಗಿ ಮಾತನಾಡಿ ಸುಭಾಷಿತನಗರದಲ್ಲಿ ಕಳೆದ ಮೂರು ವರ್ಷಗಳಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಶಾಸಕ ಡಾ ವೈ ಭರತ್ ಶೆಟ್ಟಿಯವರ ಮೂಲಕ ರಾಜ್ಯ ಸರಕಾರದ 3 ಕೋಟಿ ರೂಪಾಯಿಯ ಅನುದಾನದಿಂದ ಗುತ್ತಿಗೆದಾರ ಸುಧಾಕರ ಪೂಂಜ ಅವರು ಸುಭಾಷಿತನಗರದ ಸಮಗ್ರ ಅಭಿವೃದ್ಧಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ ಎಂದರು.
ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ ಅಸೋಸಿಯೇಶನ್ ಗೆ ಕಚೇರಿಯ ಅವಶ್ಯಕತೆ ಇದ್ದು, ಇದೇ ಬರುವ ಡಿಸೆಂಬರ್ ತಿಂಗಳಿನಲ್ಲಿ ಮುಕ್ತಾಯ ಹಂತದಲ್ಲಿರುವ ಸುಭಾಷಿತ ಪ್ರೈಡ್ ಕಟ್ಟಡದಲ್ಲಿ ದೊರಕಲಿದೆ. ಅದರ ಉದ್ಘಾಟನೆ ಡಿಸೆಂಬರ್ 31ರಂದು ನಡೆಯಲಿದೆ ಎಂದರು.
ರಾಜಕಾಲುವೆ ತಡೆಗೋಡೆ ನಿರ್ಮಾಣ, ಮುಚ್ಚಿದ ಚರಂಡಿ ನಿರ್ಮಾಣ, ಅಡ್ಡ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ, ಅಡ್ಡ ರಸ್ತೆಯಲ್ಲಿ ಬಾಕಿ ಉಳಿದಿರುವ ಕಾಂಕ್ರಿಟೀಕರಣ ಕಾಮಗಾರಿ, ಅಡ್ಡ ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗಲು ಮುಚ್ಚಿದ ಚರಂಡಿ ನಿರ್ಮಾಣ. ಅಡ್ಡ ರಸ್ತೆಯಲ್ಲಿ ಬಾಕಿ ಉಳಿದಿರುವ ಅಗಲೀಕರಣ ಹಾಗೂ ಕಾಂಕ್ರೀಟ್ ಕಾಮಗಾರಿ, ಒಳ ಚರಂಡಿ ನಿರ್ಮಾಣ. ಹೊಸ ದಾರಿ ದೀಪ ಕಂಬಗಳ ಅಳವಡಿಸುವಿಕೆ,
ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಸುರತ್ಕಲ್ ಪೊಲೀಸ್ ಅಧಿಕಾರಿಯವರ ಸಲಹೆ ಮೇರೆಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಿಕೆ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆದು ಈ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದರು
ಹೊಸ ಕಚೇರಿಯನ್ನು ಖರೀದಿಸಲು ಆರ್ಥಿಕ ಸಂಪನ್ಮೂಲ ಕ್ರೂಡಿಕರಿಸಲು ಅಜೀವ ಸದಸ್ಯತ್ವವನ್ನು ಪಡೆಯಲು ಸದಸ್ಯರಲ್ಲಿ ವಿನಂತಿಸಲಾಯಿತು. ಈಗಾಗಲೇ ಸುಮಾರು 25 ಮಂದಿ ಸದಸ್ಯರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಾರ್ಷಿಕ ವರದಿಯನ್ನು ಚಂದ್ರಶೇಖರ ಶೆಟ್ಟಿ ಮಂಡಿಸಿದರು.
ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ನರಸಿಂಹ ಸುವರ್ಣ ಮಂಡಿಸಿದರು.
ಅಸೋಸಿಯೇಶನ್ ನ ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್ ಸ್ವಾಗತಿಸಿದರು.ಲಕ್ಷ್ಮೀಚಂದ್ರಶೇಖರ ಆಚಾರ್ಯ ವಂದಿಸಿದರು. ಚಂದ್ರಶೇಖರ ಪಾಲೇಕಾರ್ ಕಾರ್ಯಕ್ರಮ ನಿರೂಪಿಸಿದರು.